Dec 17, 2014

ಕೋರಿಕೆ,
ಕವಿತೇ ,ನೀನೆಲ್ಲಿ ಅವಿತೇ ..??


ಮೊದಲಿನಂತೆ ಮೂಡಿ
ಬರುತಿಲ್ಲ ಮುದದಿ  ಏಕೋ
ಎಲ್ಲೋ  ಅಡಗಿ ಕುಳಿತೇ   
ಯಾವ ಕಾನನದಿ  ಅವಿತೇ 
ದೂರದಮಲೆನಾಡಲಿ 
ಕುಳಿತು ಕನವರಿಸುತಿಹಳು
ನಿನಗಾಗಿ   ನನ್ನೊಲವಿನಾ  ಗೆಳತಿ  
ಕತ್ತಲಲೆ ಎದ್ದು ಮೂಡಿಸಿದೆ
ಅವಳ ಕನವರಿಕೆ  
ನನ್ನೊಳಗೆ ಬಯಲಿನಲಿ 
ಬಾ ಮುದದಿ  ಮೈಮರೆಸು,
ಮನತಣಿಸು , ಅಳಲ ಆಲಿಸು,
ಬೇಗೆ ತಣಿಸಿ ಬಯಕೆ ತೀರಿಸು 
ನಮ್ಮಿಬ್ಬರ ಗೆಳೆತನಕೆ
ಸ್ನೇಹ ಸೇತುವಾದೆ ನೀನಂದು ,
ಅವಿತು ಅಣಕಿಸುತ ಕುಳಿತಿಹೆ
ಏಕೆ ನೀನಿಂದು? 
ಬಳಲಿಸುತಿಹೆ
ಇಂದೇಕೆ  ಬಾರದೇ,
ಸಾಕೆನಿಸಿದರು  ಮರುಜನ್ಮ ,
ಬೇಕೆನಿಸಿ  ಬಯಸುತಿಹಳು 
ನಿನಗಾಗಿ ನೊಂದು ,
ನರ ಜನುಮ ಮತ್ತೊಂದು . 
ಬಂದು ತೀರಿಸು ಅವಳ ಬಯಕೆ , 
ಮುಂದಿಡುತಿಹೆನು  ಗೆಳತಿಗಾಗಿ 
ಈ ನನ್ನ  ಕೋರಿಕೆ  
ಕವಿತೇ , ಬಾರದೇ
ನೀನೆಲ್ಲಿ ಅಡಗಿ ಕುಳಿತೇ ... ?? 

Dec 12, 2014

ಕಾರಿರುಳು 


ಅಪ್ಪ ಅಮ್ಮ
ಅಜ್ಜ ಅಜ್ಜಿಯರ
ಅನುಭವಗಳ
ಹಳೆಯ  ಚೀಲದಲ್ಲಿ  
ಗಂಟು ಕಟ್ಟಿ
ಅಟ್ಟಕ್ಕೆ ಎಸೆದು
ಆಡಂಬರದ
ಅಬ್ಬರಕೆ
ಅಡ್ಡಬಿದ್ದ
ಅಂಧಕಾರಕೆ
ಸರಿದೀತೇ
ಕಾರಿರುಳು!!??? 

Sep 5, 2014

ತಿನ್ನಲಾರದ ಹಣ್ಣು... ಬಲು ರುಚಿ... !!!!!!!


ಒಂದೊಂದೇ ಅಂದದ ಕಲಿಕೆಯನು   
ಹೊರಹೊಮ್ಮಿಸುವ ಹಂತದಲಿ
ಹೊಸ ಹೊಸ ಆಟ ,
ಸೊಗಸಾದ ನೋಟ


ಮುದ್ದು ಹಸುಳೆಯು  
ತೊದಲು ನುಡಿಯಲಿ
ನಿಲ್ಲಲಾರದೆ,....ನಿಂತು  
ಬಿದ್ದು..  ಅಮ್ಮಾ ...
ಎದ್ದು...  ಅಮ್ಮಾ .. . ಎನುತಾ
ನಿಂತು.... 
ನಾ ನಿಂತೆನೆಂಬ ಹೆಮ್ಮೆಯಲಿ
ಅಮ್ಮಾ ...  ಎಂದು ಕೂಗುತ
ಅಮ್ಮನ ಗಮನ ತನ್ನೆಡೆ  ಸೆಳೆಯಲು,
ಅಚ್ಚರಿಯಲಿ ಹಿಗ್ಗುತಿಹ ಕಂದನ ಕಂಡು
ಆನಂದದಿ,  ಅಚ್ಚರಿಯಲಿ ಅಮ್ಮನೂ ಹಿಗ್ಗುತಾ
ನಿಂತ ಕಂದ ಒಂದೊಂದೇ ಪುಟ್ಟ
ಹೆಜ್ಜೆ ಇಡಲು ಕಲಿತ ಕಂದ 
ಬಿದ್ದು  ಪೆಟ್ಟು ಮಾಡಿಕೊಳುತ
ಎದ್ದು ತಪ್ಪು ಹೆಜ್ಜೆಯಿಡುತ ನಗುತ
ನಡುನಡುವೆ ಅಮ್ಮಾ ಎನುತ
ರಂಜಿಸುವ ಕಂದನ ಒಂದೊಂದು 
ಕರೆಗೂ ಹಿಗ್ಗಿ  ನಲಿವ ಅಮ್ಮ
ಕಂದನ ಕಲಿಕೆಯ ಒಂದೊಂದು ಹಂತದಲೂ
ಅಮ್ಮನೊಡನೆ ಅಮ್ಮನಾದ  ಮಗಳು
ಹರುಷದ ಹೊನಲನು ಹಂಚಿಕೊಂಡು
ಹಿಗ್ಗುವ ಪುಟ್ಟ ಅಮ್ಮ,
ತನ್ನ ಕಂದನಿಗೆ
ಅಮ್ಮನಾಗುವ ಹಿರಿಮೆಗೆ ಹಿಗ್ಗುವಳು
ಪುಟ್ಟ ಪೋರಿ ಅಮ್ಮನೊಡನೆ ಆಟವಾಡುವ
ಈರ್ವ್ ರೊಡನಾಟ  
ನೋಳ್ಪ ಭಾಗ್ಯವೆಮ್ಮದು
ಆಹಾ.... ಎಂಥಾ .... ಸೊಗಸು .... !!!!!!!!!
ಮರದೊಳಗೆ ಮರ ಹುಟ್ಟಿ 
ಭೂಚಕ್ರ ಕಾಯಾಗಿ ,
ತಿನ್ನಲಾರದ ಹಣ್ಣು ಬಲು ರುಚಿ...!!!!  

Jul 24, 2014

ಆತ್ಮ ಸುನಾದಕೆ ನಿತ್ಯ ನಿವೇದನೆ

ಅಸಹಾಯಕತೆ ಅಗೋಚರ
ಶಕ್ತಿಯ ಬೆಂಬಲವ ನಂಬಿ
ನಡೆವ ದಾರಿ
ಧೈರ್ಯಕೆ ಬುನಾದಿ
ಸಾವಿರ ಸಮಸ್ಯೆಯ ಸವಾಲಿನಲೂ
ದುತ್ತೆಂದು ಮನದೆದುರು ದುಮುಕುವ
ಅಗೋಚರಿಯೇ ಸಹಚಾರಿ
ಎಲ್ಲನಿನ್ನ ಲೀಲೇ ಸಕಾರಕೂ ...!!!
ಎಂದುದ್ಘರಿಸಿ......
ನಕಾರಕೂ .. ನೀನಿತ್ತಂತಾಗಲೆಂದು
ನಿಟ್ಟುಸಿರಿಳಿಸಿ.....
ಅದೃಶ್ಯ ಅಮೂರ್ತವೇ ಅನಂತ
ಆದಿಗೂ ಅನಾದಿಗೂ
ಅಗೋಚರ ಅಂತಃ ಶಕ್ತಿ
ಸಾಧನಾಯುಕ್ತಿ
ಮನವ ಸಂತೈಸುವ ಮೂರ್ತ
ರೂಪ ಮುಂದಿರಿಸಿ
ಜ್ಯೋತಿ ಬೆಳಗಿಸಿ, ಪುಷ್ಪವಿರಿಸಿ
ಗಂಧ ಪೂಸಿ
ಪರಿಮಳದ ಧೂಪ ಹರಿಸಿ,
ನೈವೇದ್ಯವಿರಿಸಿ
ಕರಜೋಡಿಸಿ, ಕಣ್ಮುಚ್ಚಿ
ಸರ್ವೇ ಜನಾಹ ಸುಖಿನೋ ಭವಂತು ,
ಸರ್ವ ಕಾರ್ಯ ಸಿದ್ಧಿರಸ್ತು ,
ಎಂದು ಸ್ಮರಿಸಿ, ಸಂತುಷ್ಟಿಯಲಿ
ಸಾಂತ್ವನಗೊಳುತ ಸಕಲ ಜೀವಿ
ಸಾಗುವವು ಸಕಾರ್ಯಗಳಲಿ
ಸ್ಮರಿಸುವವು ಸಂಕಷ್ಟಗಳಲಿ
ಆತ್ಮ ಸುನಾದಕೆ ನಿತ್ಯ ನಿವೇದಿಸಿ...
ನಡೆವವು ಬದುಕ ದಾರಿಯಲಿ

Jul 6, 2014

ಸುಲೋಚನೇ...  ನಿನ್ನದೇ  ಯೋಚನೆ ..... ????


ಜನ್ಮಜಾತ ಜ್ಯೋತಿಯ
ಬಾಲನೇತ್ರ ನ್ಯೂನತೆ
ಅಂತೆ ಬೆಳೆದು ಮುನ್ನಡೆಯೇ
ಉದರಪೋಶ ಅಕ್ರಮ
ಪೌಷ್ಠಿ ಕಾಂಶ ಸೋನ್ನೆಯಾಗೆ
ಅಕ್ರಮವೇ ಸಕ್ರಮ
ಅರ್ಧ ಶತಕ ಸವೆದ ಬಳಿಕ
ಅಭಾಗ್ಯತನ ಅಳತೆ
ಅಂತು ಇಂತು ಕುಂದು ಬಂತು
ನಿಮೀಲ ನೇತ್ರ ಜ್ಯೋತಿಗೆ
ಮಬ್ಬು ಮುಸುಗಿ  ಕತ್ತಲಡರಿ
ತಡಕಾಡಿ ಹುಡುಕುವವು
ಸ್ಪಷ್ಟ ಜಗವ ಕಾಣಲು
ದೃಷ್ಠಿ ಬಾಧೆ  ಕಳೆಯಲು
ನೇತ್ರ ತಜ್ಞ ರೊಡೆಯನಾ
ಮುಖಾರವಿಂದ ದೊಡವೆಯ
ಧರಿಸಲೇಕೋ ಕಸಿವಿಸಿ  
ಕಸಿಯಲೆಲ್ಲ ಮಂಜು ಕವಿತೆ
ಧರಿಸಲು ಹಿಂಜರಿಯಲು
ವಿಶ್ವವೆಲ್ಲ ಮಸಿಮಸಿ
ಸುಲೋಚನೆಯ  ಮರೆತರೆ
ಆತಂಕವೇ ಜೀವನ
ಮರೆತಂತೆಯೇ ಚೇತನಾ 

Jun 19, 2014

ಪರಿಸರ ಜಾಗೃತಿ ಕಾರ್ಯಕ್ರಮ  ಎಂ ಕೃಷ್ಣ ಅಂಧ ಮಕ್ಕಳ  ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ  ಮಕ್ಕಳ ಆರೋಗ್ಯಕ್ಕೆ ಪೂರಕವಾದ ಪಪಾಯ  ಹಲಸು ,ಮಾವು ತೆಂಗು ಮತ್ತು ವಿವಿಧ ಬಗೆಯ ಹೂ ಗಿಡಗಳನ್ನು ಶಾಲೆಯ ಮಕ್ಕಳೊಂದಿಗೆ ಎಲ್ಲರೂ ಉತ್ಸಾಹದಿಂದ ನೆಟ್ಟೆವು. ಮತ್ತು ಪರಿಸರಕ್ಕೆ ಪೂರಕವಾದ ವೈಜ್ಞಾನಿಕ ಪರಿಣಾಮ ಬೀರುವ ಅಗ್ನಿಹೋತ್ರದಿಂದ ಕಾರ್ಯಕ್ರಮ ಆರಂಭಿಸಲಾಯಿತು. ಮಕ್ಕಳೂ ಸಹ ಸಮಿತ್ತನ್ನು ಅರ್ಪಿಸಿ ಆನಂದಿಸಿದರು. ಹಿಂದೆ ಋಷಿಮುನಿಗಳು ಪರಿಸರ ಶುದ್ಧಿಗಾಗಿ ,ಸಮಾಜದ ಒಳಿತಿಗಾಗಿ ಹೋಮಹವನಗಳನ್ನು ಮಾಡುತ್ತಿದ್ದರು ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಸರಳ ವಿಧಾನವನ್ನು ಅನುಸರಿಸುವುದರಿಂದ ವಾಯುಮಾಲಿನ್ಯವನ್ನು ತಡೆಗಟ್ಟ ಬಹುದಾಗಿದೆ. 

Jun 7, 2014

ಹೂವ   ಬಯಕೆ 


ಅಂದವಾದ  
ಗಂಧವಿರದ
ಕಾಕಡವು ನಾನು. 
ಅಂದ ಗಂಧ
ಮಿಲನವಾದ
ದುಂಡು ಮಲ್ಲೆ ನೀನು. 
ಪಚ್ಚೆ ತೆನೆಯ ಸೇರಿಸಿ
ವಿವಿಧ ಗಂಧ ಲೇಪಿಸಿ
ಧರಿಸಲು ಅಣಿಯಾಗುವೇ  
ಆಶೆಯಿಂದ
ಮುಡಿದ ಮೊಗದಿ
ಮಂದಹಾಸ ಹರಿಸುವೆ   

May 27, 2014

ಸ್ಪಂದನ ವೇದಿಕೆ ಮತ್ತು ಜಿಲ್ಲಾ ಲೇಖಕಿಯರ ಬಳಗ ,ಹಾಸನ ,
ಇವರ ಸಹಯೋಗದೊಂದಿಗೆ
ಹೊಯ್ಸಳ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ   ಜೀ. ಎಸ್. ಎಸ್.ರವರ 
ಗೀತನಮನ ಕಾರ್ಯಕ್ರಮವನ್ನು
ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಲಾಯಿತು. ಮತ್ತು 
 
ಜನತಾ ಮಾಧ್ಯಮ ಸಂಪಾದಕರಾದ ಅರ್.ಪಿ.ವೆಂಕಟೇಶಮೂರ್ತಿಯವರನ್ನು
ಸನ್ಮಾನಿಸಿ ಗೌರವಿಸಲಾಯಿತು

Apr 29, 2014

ಸ್ಪಂದನ ವೇದಿಕೆ ,ಹಾಸನ ಮತ್ತು ಮಹಿಳಾ ಪ್ರಥಮದರ್ಜೆ ಕಾಲೇಜು ,ಹಾಸನದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನೆಹರೂಜಿ ಯವರಿಂದ ವೃತ್ತಿಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ತಮ್ಮ ಸ್ವಂತ ಖರ್ಚಿನಲ್ಲಿ  ಬೆಂಗಳೂರಿನಿಂದ ಹಾಸನಕ್ಕೆ ಬಂದು ೬೫-೭೦ರ ಹರೆಯದಲ್ಲೂ ಎರಡು ಗಂಟೆಗಳ ಕಾಲ ಸತತವಾಗಿ ಸ್ವಲ್ಪವೂ ಆಯಾಸಪಡದೇ ನಿಂತು ವಿಧ್ಯಾರ್ಥಿಗಳಿಗೆ ವಿವರವಾದ ಅತುತ್ತಮ ಹಾಗೂ ಉಪಯುಕ್ತ ಮಾಹಿತಿಯ ಬಗ್ಗೆ ಮಾರ್ಗದರ್ಶನ ನೀಡಿ ಪ್ರಶ್ನೆ ಕೇಳಿದಂತಹ ವಿಧ್ಯಾರ್ಥಿಗಳಿಗೆ ತಾವೇ ಕ್ಯಾಡ್ಬರಿಸ್ ಚಾಕೋಲೆಟ್ ಗಳನ್ನ ಬಹುಮಾನವಾಗಿ  ಕೊಟ್ಟು ನಮ್ಮಿಂದ ಒಂದು ಉಪಹಾರವನ್ನುಸಹ  ಸ್ವೀಕರಿಸದೆ ೧-೩೦ ರ  ವೇಳೆಗೆ ಕಾರ್ಯಕ್ರಮ ಮುಗಿಸಿಕೊಂಡು ೪ ಗಂಟೆ  ಫ್ಲೈಟ್ಗೆ ಹಾಸನದಿಂದ ಬಾಂಕಾಕ್ ಗೆ ಹೊರಟರು. ಇಂತಹ ವಿಶೇಷ ವ್ಯಕ್ತಿಗಳು ಇದ್ದಾರೆ.ಎಂಬುದೇ  ಸಂತಸದ, ಹೆಮ್ಮೆಯ  ಸಂಗತಿ. ಹೀಗೆ ಪ್ರತಿಯೊಬ್ಬವಿಧ್ಯಾವಂತರಲ್ಲೂ  ಸಾಧಕರಲ್ಲೂ ಇಂತಹ ಸಮಯದ ಸದುಪಯೋಗ,ಸಮಯಪ್ರಜ್ಞೆ, ನಿಸ್ವಾರ್ಥಸೇವಾ ಮನೋಭಾವ ಬೆಳೆದರೆ ನಮ್ಮ ನಾಡು ,ನಮ್ಮ ದೇಶದ ಸಮಸ್ಯೆಗಳು ಸವಾಲಾಗಿ ಸ್ವೀಕರಿಸುವ ಸ್ಥೈರ್ಯ ಪ್ರತಿಯೊಬ್ಬರಲ್ಲೂಮೈಗೂಡುವುದರಲ್ಲಿ  ಸಂದೇಹವಿಲ್ಲವೆನ್ನಿಸಿತು.










 











Apr 13, 2014

ಸ್ಪಂದನ ವೇದಿಕೆ ,ಹಾಸನ ,ಹಾಗು ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗಮರ್ಕುಲಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹದಿಹರೆ ಹರೆಯದ ಸಮಸ್ಯೆಗಳು ಮತ್ತು ಪರಿಹಾರ
ಕುರಿತು ಮಾತನಾಡಿದ ಡಾII ಸಾವಿತ್ರಿ ಮೇಡಮ್ ರವರು ಮಾತನಾಡಿ ಮಕ್ಕಳ ಮಾನಸಿಕ ಹಾಗು
ದೈಹಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ದೈರ್ಯದಿಂದ ವಿರೋಧಿಸುವುದ್ಲ್ಲದೆ 
ಯವಾಮಿಷಕ್ಕೂ ಬಲಿಯಾಗದಂತೆ  ಎಚ್ಕಾರಿಕೆಯಿಂದಿರುವುದಲ್ಲದೆ,ಸ್ವಚ್ಚತೆಯ ಕಡೆ ಹೆಚ್ಚು ಗಮನ ಹರಿಸಬೇಕು 
ಕೇವಲ ದೈಹಿಕ ಆಕರ್ಷಣೆಯನ್ನೇ  ಪ್ರೀತಿ ಎಂದು ಭಾವಿಸಿ ಅಪ್ರಾಪ್ತ ವಯಸ್ಸಿನಲ್ಲೇ ದಾರಿತಪ್ಪಿ ಭವಿಷ್ಯ 
ವನ್ನು ಹಾಳು ಮಾಡಿಕೊಳ್ಳದೆ ,ಲಿಂಗಭೇದವಿಲ್ಲದೆ ಎಲ್ಲರೂ ಸೋದರತ್ವ ಭಾವವನ್ನು ಬೇಳೆಸಿಕೊಳ್ಳುವುದಲ್ಲದೆ 
ಎಲ್ಲರನ್ನು ಗೌರವಿಸುದನ್ನು ಕಲಿತಾಗ ಯಾವುದೇ ಅಚಾತುರ್ಯಗಳಿಗೂ ಅವಕಾಶವಿರುವುದಿಲ್ಲ.ಎಂದರು 
ಹಾರ್ಮೋನುಗಳ ವೆತ್ಯಯ ದಿಂದಾಗುವ ದೈಹಿಕ ಮಾನಸಿಕ ಬದಲಾವಣೆಗಳು ,ಅದರ ಪರಿಣಾಮ 
ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ,ಆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ,ದುಶ್ಚಟಗಳಿಂದ  
ಎದುರಾಗುವ ಮಾರಕ ರೋಗಗಳು,ಅದರ ದುಷ್ಪರಿಣಾಮಗಳ ಕುರಿತು ವಿವರಿಸಿ ,ಆರೋಗ್ಯದ ಯಾವುದೇ 
ಸಮಸ್ಯೆಗಳಿದ್ದರೂ  ನಮ್ಮ ನರ್ಸಿಂಗ್ ಹೋಂ ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯ ಬಹುದೆಂದರು. 



ಹಳ್ಳಿಯ  ಹಸಿರಿನ ಅಂದವಾದ ಉದ್ಯಾನ ವನದ ನಡುವೆ ಮುಗ್ಧ ಮಕ್ಕಳೊನ್ದಿಗಿನ ಒಡನಾಟ ಆಹ್ಲಾದಕರವೆನಿಸಿತು  

Apr 8, 2014

        ಸ್ಪಂದನ ವೇದಿಕೆಹಾಸನ ,ಕ. ಸಾ. ವೇ,ಹಾಸನ  ಮತ್ತು ಕಲಿವೀರ್ ಪ್ರೌಢ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ
"ಆರೋಗ್ಯದ ಅರಿವು"
ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮದಲ್ಲಿ
ಅಧ್ಯಕ್ಷರಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ  ಡಾ. ಸಾವಿತ್ರಿಯವರು 
ಹಾಗು ಅತಿಥಿಗಳಾಗಿ ಜಿ.ಎಸ್. ಕಲಾವತಿಮಧುಸೂದನ್
ಮತ್ತು ವಿಜಯಕುಮಾರಿ ಉಪಸ್ಥಿತರಿದ್ದರು.