ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು
ಗಿರಿಕಾನನಗಳ ನಡುವೆಯೇ ಸಾಗಿಹ
ಸುಂದರ ವೇಣಿಯ ಹೆದ್ದಾರಿ
ವನರಾಶಿಯ ಸೊಬಗಿಗೆ ರಹದಾರಿ
ನಯನ ಹರಿದರತ್ತತ್ತ ಒತ್ತೊತ್ತ ಹಸಿರಸಿರಿ
ವಾತ್ಸಲ್ಯದಿ ಒಂದಕೊಂದು ಬೆಸೆದ ಬೆಟ್ಟಹಾರ
ನಟ್ಟನಡುವೆ ಪುಟ್ಟ ಮುದ್ದುಮನೆ
ಅಂಕು ಡೊಂಕು ಹಾದಿಗೇ ಎದುರೆ ಚಾಚಿದಂತೆ ಬೆಟ್ಟ
ರವಿಕಿರಣದ ನರ್ತನದಿ
ಪಂಚರಂಗಿ ಪರ್ಣಶಾಲೆ ಹಡೆದ ಹೊನ್ನದರ್ಶನ
ಶೋಭಿತೆಯರ ಸಭಾಂಗಣ
ಸುಮನೋಹರ ಸುರಸುಂದರ ಬಿನ್ನಾಣಗಿತ್ತಿಯರು
ಸುತ್ತಲು ಜಲರಾಶಿಗೆ ಮುತ್ತಿನಿಂತು ಗಿರಿವನವನೆ
ಅಪ್ಪಿಕೊಂಡ ಆಗಸಕೆ ಸುವರ್ಣ ತಳಿರ ತೋರಣ
ಚುಮುಚುಮು ಚಳಿಯಲಿ ಚೈತ್ರನ ಬರವಿಗೆ
ತನ್ನೆಲೆಗಳನೆ ಸುವರ್ಣಗೊಳಿಸಿ ಕಾದಿಹ
ಸುಮನಸೆ ಹಸಿರಲೇ ಹಾಯ್ದ ಹೂವಿನ ಭೂಸಿರಿ
ತರಳೆಯರಿಲ್ಲದ ಊರಲಿ ಮಾಗಿದ ತಳಿರೆ ತಳೆದಿಹ
ವರ್ಣರಂಜಿತ ಮೈಸೊಬಗು,ಆಹ್ವಾನಕಲಂಕೃತ
ಹೂಧಾನಿ, ಮಂದಹಾಸದ ಮಿನುಗು ಸ್ವಾಗತಕೆ
ಸಸ್ಯ ಶ್ಯಾ - ಮಲೆಯರ ನಡುವೆ
ನಿತ್ಯ ಕೋಮಲೆಯರ ಮಾಯಮಾಲುಗಳು
ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು
ಒಡಲೊಳಗೆ, ಭೇದವಿಲ್ಲದೆ ಬೆರೆತು ಮರೆಯೋಣ
ಅರೆಘಳಿಗೆ ಕಲ್ಲು ಮುಳ್ಳುಗಳ ಕಡಲು
-----------------------------------
ಮೂರು ಮಾಸಗಳ ಮನೋಲ್ಲಾಸಕೆ ಮತ್ತು ಬ್ಲಾಗ್ ಲೋಕವನ್ನು ಪ್ರವೇಶಿಸಲು ಮೂಲ
ಕಾರಣ ಕರ್ತರು,ಪ್ರೇರಕರು, ಕವನಸ್ಪೂರ್ತಿಯಸೆಲೆಗಳೂ ಆದ,
ನನ್ನ ಪ್ರೀತಿಯ ಮಾನಸರಘುಪ್ರಸಾದ್ ರವರಿಗೆ
ಉಡುಗೊರೆಯಾಗಿ ಈ ಕವನಕಾಣಿಕೆ.
ಪ್ರಕೃತಿಯ ಪೂರಣದಂತೆ ನಿಮ್ಮ ವೈವಾಹಿಕ
ಬದುಕು ಎಂದೆದೂ ಹಸಿರಾಗಿರಲೆಂದು
ಹಾರೈಸುವ ಅಮ್ಮ ಕಲಾವತಿಮಧುಸೂಧನ್