Jan 25, 2011

     ಕುತಂತ್ರಗಳಿಂದ 
    ಅತಂತ್ರವಾಗದಿರಲಿ
        ಸ್ವಾತಂತ್ರ್ಯ ,
ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
 

   ದೇವರು ದೈಹಿಕವಾಗಿ ಎಲ್ಲಾ ಅಂಗಾಂಗಗಳನ್ನೂ  ಆರೋಗ್ಯ ಪೂರ್ಣವಾಗಿಟ್ಟಿದ್ದರು ಪ್ರತಿಯೊಂದಕ್ಕೂ ಮಾರ್ಗದರ್ಶಕರು
ಹಿಂದೆಯೇ ಇರಬೇಕಾಗುವುದು.ಅವರಿಗೆ ಧೈರ್ಯ ,ಸ್ಥೈರ್ಯ,ಸ್ವಾವಲಂಬನೆ,ಸ್ವಾಭಿಮಾನ ಇವುಗಳನ್ನು ರೂಢಿಸಿಕೊಳ್ಳಲು
ಆತ್ಮವಿಶ್ವಾಸವನ್ನುತುಂಬಲು  ಎಷ್ಟೆಲ್ಲಾ ಸರ್ಕಸ್ ಮಾಡುತ್ತೇವೆ. ಆದರೆ ಅಂಗವಿಕಲರಿಗೆ ಆತ್ಮವಿಶ್ವಾಸ  ಹುಟ್ಟಿನಿಂದಲೇ
ಬಳುವಳಿಯಾಗಿ ಬಂದಿರುವುದಲ್ಲದೇ ನಾವು ಏನನ್ನಾದರೂ ಸಾದಿಸಲೇಬೇಕೆಂಬ ಆಕಾಂಕ್ಷೆ ಗುರಿಯನ್ನು ಹೊಂದಿರುತ್ತಾರೆ.
  
     ಬೆಂಗಳೂರು ಎಷ್ಟುಜನಜಂಗುಳಿ,ಟ್ರಾಫಿಕ್  ಇರುವ ಮಹಾನಗರ.ಅಂತಹ ವಾತಾವರಣದಲ್ಲೂ ಅಂಧರು
ಧೈರ್ಯದಿಂದ ಒಬ್ಬೊಬ್ಬರೇ ತಮ್ಮ ಕೆಲಸಕಾರ್ಯಗಳಿಗಾಗಿ  ಯಾರನ್ನು ಅವಲಂಬಿಸದೆ ಓಡಾಡುತ್ತಿರುತ್ತಾರೆ.
ನಾನು ಬೆಂಗಳೂರಿನಲ್ಲೇ ಇದ್ದಾಗ ಶಾಲೆಗೆ ಬಸ್ನಲ್ಲಿ ಹೋಗಿ ಬರುವಾಗ ಇಬ್ಬರು ಅಂಧರು,ಅಂದರೆ ಪತಿ ಪತ್ನಿಯರು
ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕೈನಲ್ಲಿ ಒಂದು ಸ್ಟಿಕ್ ಹಿಡಿದುಕೊಂಡು  ಸರಾಗವಾಗಿ ರಸ್ತೆ ದಾಟಿ ಬಸ್
ಹತ್ತುತ್ತಿದ್ದರು.ನನಗೆ ಅವರ ಶ್ರಮದ ಬದುಕನ್ನು ನೋಡಿದಾಗ ಕರುಣೆಗೆ ಬದಲಾಗಿ ಹೆಮ್ಮೆ ಎನಿಸುತ್ತಿತ್ತು. ಪ್ರತಿದಿನ
ಒಬ್ಬರಲ್ಲ ಒಬ್ಬರು  ಅಂಗವಿಕಲರನ್ನು ನೋಡಿದಾಗಲೆಲ್ಲ  ಅವರ ಬಗ್ಗೆ   ಹೆಮ್ಮೆ ಎನಿಸುವುದು .
                 
     ಬಹಳ ಹಿಂದಿನಿಂದಲೂ ಅಂತಹ ಅಂಗವಿಕಲರಿಗೆ ನನ್ನ  ಕೈಲಾದ ಸೇವೆಯನ್ನುಮಾಡುವ  ಹಂಬಲ .
ಆದರೆ ಬದುಕು ಕಟ್ಟಿಕೊಳ್ಳುವ  ಸಾಹಸದಲ್ಲೇ ಅರ್ಧ ಆಯಸ್ಸು ಮುಗಿಯಿತು.ಈಗಷ್ಟೇ  ಸ್ವಲ್ಪ ಬಿಡುವು ಸಿಕ್ಕಿದೆ.
ಆದರೆ ಆರ್ಥಿಕವಾಗಿ ಏನು ಮಾಡಲು ನನ್ನಿಂದ ಆಗದಿದ್ದರು ನನ್ನ ನೆಚ್ಚಿನ ಹವ್ಯಾಸವಾದ ಹಾಡುಗಾರಿಕೆಯನ್ನೇ
ಮಕ್ಕಳಿಗೆ ಕಲಿಸಿ. ಅವರಿಂದ ಕಾರ್ಯಕ್ರಮಗಳಲ್ಲಿ ಹಾಡಿಸುವ ಮತ್ತು ಆಕಾರ್ಯಕ್ರಮದಿಂದ ಬರುವ ಸಂಭಾವನೆ ಅಥವಾ ಗೌರವ ಧನದಿಂದ ಮಕ್ಕಳಿಗೆ ಸ್ವಲ್ಪ ಸಹಾಯವಾದರು ಆಗುವಂತೆ ಮಾಡುವುದು ನನ್ನ ಉದ್ದೇಶ ಮತ್ತು ಆಶಯ. .   

       ಈಗ ಅದಕ್ಕೆ ಸರಿಯಾದ ಕಾಲವು ಕೂಡಿ ಬಂದಂತಿತ್ತೇನೋ ಹಾಸನದಲ್ಲಿರುವ  ಕೃಷ್ಣ ಅಂಧರ  ವಸತಿ
ಶಾಲೆಗೇ ಹೋಗಿ ಅಲ್ಲಿನ ವ್ಯವಸ್ಥಾಪಕರಾದ ಡಾ.ಕೃಷ್ಣಮೂರ್ತಿಯವರನ್ನು ಭೇಟಿಮಾಡಿ ಅನುಮತಿ ಕೇಳಿದೆ."
ಯಾರಾದರು ಸಂಗೀತ ಶಿಕ್ಷಕರು ಬರುತ್ತಿದ್ದಾರೆಯೇ ?"ಎಂದು."ಇಲ್ಲ ಮೇಡಂ ,ಹಿಂದೆ ಒಬ್ಬರು ಬರ್ತಾ ಇದ್ದರು.
ಅವರಿಗೆ ಸರ್ಕಾರಿಶಾಲೆಯಲ್ಲಿ ಕೆಲಸ ಸಿಕ್ಕಿದೆ.ಈಗ ಯಾರು ಬರುತ್ತಿಲ್ಲ" ಎಂದರು.ಸರಿ  ,"ನೀವೂಅನುಮತಿ
ಕೊಟ್ಟರೆ, ನಾನು ವಾರದಲ್ಲಿ ಎರಡುದಿನ ಮಕ್ಕಳ ಬಿಡುವಿನ ವೇಳೆಯಲ್ಲಿ ಬಂದು ಮಕ್ಕಳಿಗೆ ಇಷ್ಟವಾಗುವ
ಪ್ರಕಾರವನ್ನು ಹೇಳಿಕೊಡುತ್ತೇನೆ."ಎಂದೇ.ಅದಕ್ಕೆ ಅವರು ಸಂತೋಷದಿಂದ ಒಪ್ಪಿಗೆ ಇತ್ತರು. ನಾನು
ಮಕ್ಕಳನ್ನೆಲ್ಲ ಒಮ್ಮೆ ಕೇಳಿದೆ.ಮಕ್ಕಳು ಸಂತೋಷದಿಂದ ಒಪ್ಪಿದರು.

         ಸರಿ ನಾನು ನಿಗದಿಪಡಿಸಿದ ದಿನದಿಂದ ಶಾಲೆಗೇ ಹೋಗಲು ಆರಂಬಿಸಿದೆ.  ಶಾಲೆಯ ಗೇಟಿನ ಬಳಿ
ಹೋಗುತ್ತಿದ್ದಂತೆ  "ಸಂಗೀತ ಮೇಡಂ ಬಂದರು" ಎಂದು ಅಕ್ಕರೆಯಿಂದ ಎಲ್ಲಾ ಮಕ್ಕಳು ಓಡಿ ಬಂದು ಸುತ್ತುಗಟ್ಟಿ
ಪ್ರೀತಿಯಿಂದ ಕೈ ಹಿಡಿದುಕೊಳ್ಳುತ್ತಿದ್ದರು.ಅಲ್ಲಿ  ಐದನೇ ತರಗತಿ ಓದುತಿದ್ದ ರಮೇಶ್ಗೆ ತಬಲಾ ಬಾರಿಸುವು
ದೆಂದರೆ ತುಂಬಾ ಇಷ್ಟ ಮತ್ತು ಒಳ್ಳೆಯ ಹಾಡುಗಾರ ಕೂಡ.ಅಲ್ಲಿ ಆರು ಏಳು ಮಕ್ಕಳಿಗೆ ಹಾಡುವ ಆಸಕ್ತಿ.
ಹೇಳಿಕೊಟ್ಟಿದ್ದನ್ನು ಬಹಳ ಬೇಗನೆ ಕಲಿಯುವರು.ಅವರಿಂದಲೇ ಅವರು ಕಲಿತಿರುವ ಹಾಡನ್ನು ಹಾಡಿಸುತ್ತಿದ್ದೆ.
ಬಹಳ ಸುಶ್ರಾವ್ಯವಾಗಿ ಹಾಡುವರು.ಮಕ್ಕಳಿಗೆ ಕಾರ್ಯಕ್ರಮದಲ್ಲಿ ಹಾಡಿಸುವ ಮೂಲಕ ಮಕ್ಕಳಲ್ಲಿರುವ
ಪ್ರತಿಭೆಯನ್ನು ಪ್ರೋತ್ಸಾಹಿಸುವುದು, ಉತ್ತೇಜಿಸುವುದು  ನನ್ನ ಮುಖ್ಯ ಉದ್ದೇಶವಾಗಿತ್ತು.

     ಹಾಸನದಲ್ಲಿ ಪ್ರತಿತಿಂಗಳು ಮೊದಲ ಭಾನುವಾರದಂದು ಮನೆಮನೆ ಕವಿಗೋಷ್ಠಿ ಏರ್ಪಡಿಸಿರುತ್ತಾರೆ. ಅಲ್ಲಿ ಯಾವುದೇ ತಾರತಮ್ಯವಿಲ್ಲದೆ ಉದಯೋನ್ಮುಖರಿಂದ ಪ್ರಬುದ್ಧ ಖ್ಯಾತ ಸಾಹಿತಿಗಳವರೆಗೆ ಮುಕ್ತ  ವೇದಿಕೆಯ
ಅವಕಾಶವಿದೆ.ಅಲ್ಲಿ ನಡೆಯುತ್ತಿರುವ ಸಾಹಿತ್ಯಿಕ ಚಟುವಟಿಕೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ
ಪ್ರ್ರಮುಖ್ಯತೆ ಕೊಡಲಾಗುವುದು. ಅಲ್ಲಿನ ಪ್ರಸ್ತುತ ಸಂಚಾಲಕರಾದ ಸತ್ಯನಾರಾಯಣರವರನ್ನು ಮತ್ತು
ಏನ್.ಎಲ್.ಚನ್ನೇಗೌಡರವರಲ್ಲಿ ನನ್ನ  ಉದ್ದೇಶದ ಪ್ರಸ್ತಾಪವನ್ನಿರಿಸಿದೆ. ಅವರು ಸಹ ಖಂಡಿತ ಮಾಡಿಸಿ
ಮೇಡಂ ,ಎಂದರು .ಹಾಗೆ . "ನಮ್ಮ ಕವಿಗೋಷ್ಠಿಯಲ್ಲಿ ವಾಚಿಸುವ  ಕವನಗಳನ್ನು  ರಾಗ ಸಂಯೋಜನೆ ಮಾಡಿಸಿ
ಹಾಡಿಸಿ."ಎಂದು  ಸಲಹೆಯನ್ನು ಕೊಟ್ಟರು.ಅದನ್ನು ಕೇಳಿ ನನಗೆ ನನ್ನ  ಪ್ರಯತ್ನಕ್ಕೆ ರೆಕ್ಕೆ ಮೂಡಿದಂತೆ ಆಯಿತು.
ಖಂಡಿತ ಸರ್ ಎಂದು ಹೇಳಿ.ಮಕ್ಕಳಿಗೆ ವಿಷಯ ತಿಳಿಸಿದಾಗ ಸಂಭ್ರಮದಿಂದ ಕುಣಿದಾಡಿದರು.
ನನಗೆ ಆಮಕ್ಕಳ ಒಡನಾಟವೇ ಆತ್ಮಿಯವೆನಿಸುತ್ತಿತ್ತು. ಅವರಲ್ಲಿ ಯಾವುದೇ ರೀತಿಯ ಭೇದಭಾವವಾಗಲಿ,
ತಾರತಮ್ಯವಾಗಲಿ, ಕಿಂಚಿತ್ತು ಇಲ್ಲದೆ ಅಲ್ಲಿಸೋದರತ್ವ,ಸ್ನೇಹದಿಂದ ಕೂಡಿ  ಆಡಿ ,ಹಾಡಿ ಕಲಿಯುವರು.    
ಒಂದೇ ತಾಯಿಯ ಮಕ್ಕಳಾದವರೆ ಅಷ್ಟು ಹೊಂದಾಣಿಕೆಯಿಂದ ಇರಲು ಅಸಾಧ್ಯವಾಗಿರುವಾಗ.ಎಲ್ಲೆಲ್ಲಿಂದ
ಬಂದವರೋ ಒಟ್ಟಾಗಿ ಕಲೆತು ಸಹಬಾಳ್ವೆಯಿಂದ ಇರುವ ಆಮಕ್ಕಳನ್ನು ನೋಡಿ ನಾವು ಕಲಿಯಬೇಕಿದೆ
ಎನಿಸುವುದು.ಅಂತಹ ವಾತಾವರಣದಲ್ಲಿ ಮುಗ್ಧ ಮಕ್ಕಳಿಗೆ ಕಲಿಸುವ ಸುಯೋಗ ನನ್ನ ಪಾಲಿನ ಸೌಭಾಗ್ಯವೇ
ಸರಿ. ನಂತರ  ನಾಲ್ಕೈದು ದಿನಗಳಷ್ಟೇ   ನಾನು ಹೇಳಿಕೊಟ್ಟಿದ್ದು. ಮಧ್ಯದಲ್ಲೇ ನಾನು ಏನೋ ಕೆಲಸದ ನಿಮ್ಮಿತ್ತ
ಬೆಂಗಳೂರಿಗೆ ಹೋಗಬೇಕಾಗಿ ಬಂದದ್ದರಿಂದ ,ಮಕ್ಕಳಿಗೆ ಹೇಳಿ ಹೊರಟೆ "ನಾನು ಬರುವಷ್ಟರಲ್ಲಿ ಚೆನ್ನಾಗಿ ಕಲಿತು
ಹಾಡಿದರೆ ,ಮುಂದೆ ಇನ್ನು ಬೇರೆ ಬೇರೆ ಕಾರ್ಯಕ್ರಮಕ್ಕೂ ಹಾಡುವ ಅವಕಾಶಗಳು ಸಿಗುತ್ತವೆ ಮಕ್ಕಳೇ .
ನೋಡೋಣ ನೀವು ಹೇಗೆ ಅಭ್ಯಾಸ ಮಾಡಿರುತ್ತೀರಿ",ಎಂದು ಹೇಳಿ ಹೊರಟೆ.ಮಕ್ಕಳು ಬಹಳ ಉತ್ಸಾಹದಿಂದ
ಒಪ್ಪಿ  ಚೆನ್ನಾಗೆ ಅಭ್ಯಾಸ ಮಾಡಿದ್ದರು. ನಾನು ಕಾರ್ಯಕ್ರಮಕ್ಕೆ ಹೊರಡಲು ಒಂದು ಗಂಟೆ ಮುಂಚಿತವಾಗೆ
ಮಕ್ಕಳನ್ನು ಕರೆದೊಯ್ಯಲು ಹೋಗಿದ್ದೆ.ಆದರೆ ಮಕ್ಕಳು ಇನ್ನು  ಸಂಭ್ರಮದಿಂದ ಹೊರಡಲು ಸಿದ್ದತೆಯಲ್ಲಿದ್ದರು.
ಅವರ ಸಡಗರ ನೋಡಿ ನನ್ನ ಪ್ರಯತ್ನ ಸಾರ್ಥಕವಾಯಿತು ಎನಿಸಿತು. ಶುಭ್ರವಾಗಿ ಸ್ನಾನ ಮಾಡಿ,ತಲೆ
ಬಾಚಿಕೊಂಡು ಶುಭ್ರವಾದ ಬಣ್ಣಬಣ್ಣದ ಚೂಡಿದಾರ್,ಗಾಗರ ಧರಿಸಿ ,ಮುಖಕ್ಕೆ,ಸ್ನೋ ಪೌಡರ್ ಹಾಕಿಕೊಂಡು
ಶ್ರದ್ದೆ ಆಸಕ್ತಿಯಿಂದ  ಸುಂದರವಾಗಿ ಅಲಂಕರಿಸಿಕೊಂಡು ಸಂಭ್ರಮದಿಂದ ಹೊರಟ ಮಕ್ಕಳನ್ನುನೋಡಿ
ಇವರು ಅಂಧರೆ,ಅಂಗವಿಕಲರೇ ಎಂದು ನಮ್ಮ ಕಣ್ಣನ್ನು ನಾವೇ ನಂಬಲಾರದಷ್ಟು ಅಚ್ಚರಿಯಾಯಿತು.ಅವರ ಆಸಕ್ತಿಗೆ
ಹೃದಯತುಂಬಿ ಬಂದಿತು. ಕಾರ್ಯಕ್ರಮದಲ್ಲಿ ಶುಶ್ರಾವ್ಯವಾಗಿ ಹಾಡಿದರು ಎಲ್ಲರೂ ಮೆಚ್ಚುಗೆಯಿಂದ ಶ್ಲಾಘಿಸಿದರು.
ಅಲ್ಲಿ ಕವಿ ಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದ ಉಪನ್ಯಾಸಕರಾದ ಅಪ್ಪಾಜಿಗೌಡರು ಶ್ಲಾಘಿಸಿ "ಮತ್ತೇ ಎಲ್ಲಾದರು
ಕಾರ್ಯಕ್ರಮವಿದ್ದಾಗ  ನನಗೆ ತಿಳಿಸಿ ನನ್ನಿಂದಾದದ್ದನ್ನು ನಾನು ಮಾಡುತ್ತೇನೆ" ಎಂದರು.ಅದಕ್ಕೆ ಖಂಡಿತ ತಿಳಿಸುತ್ತೇನೆ.
ಎಂದುಹೇಳಿ ,ಮಕ್ಕಳನ್ನು ಸುರಕ್ಷತೆಯಿಂದ ಅವರವಸತಿಗೆ ತಲುಪಿಸುವವ್ಯವಸ್ಥೆ ಮಾಡಿ.ಮನೆಗೆ ಹಿಂತಿರುಗಿದೆ.

         ಇದನ್ನ ಎಲ್ಲಾ ಮಕ್ಕಳು ಮಾಡುತ್ತಾರೆ.ಇದರಲ್ಲೇನು ವಿಶೇಷತೆ ಎನ್ನುವಿರಾ ? ಅದು ಸಹಜವೇ .ಆದರೆ ಆ
ಮಕ್ಕಳ  ಸಂಭ್ರಮ ,ಸಂತಸದಿಂದ ಅರಳಿದ ನಗುವಿಗೆ ನನ್ನ ಸಮಯ ಸದುಪಯೋಗವಾಯಿತಲ್ಲ,ಎನುವ ಸಂತೃಪ್ತಿ.
ಸಾರ್ಥಕ್ಯ ಭಾವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ  ಹಂಬಲ..ಆಮಕ್ಕಳ ಸಹಬಾಳ್ವೆಯೇ ನಮಗೊಂದು
ಸಂದೇಶವಾಗುವುದು.ಆದರ್ಶವಾಗುವುದು.  ಆ ಮಕ್ಕಳ ಒಡನಾಟದಲ್ಲಿ ಅವರ ಒಡಲಾಳವನ್ನು ಕವನದ ರೂಪದಲ್ಲಿ
ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ....

ಅಂಗಊನವಾದರೇನು ಆಸೆ ಉಜ್ವಲ 
ಆತ್ಮವಿಶ್ವಾಸವೇ..  ನಮ್ಮ  ಬಲ! 

ಮತಭ್ರಾಂತಿಯಿಂದ  ಅಂಧರಾದ ನಿಮಗೆ  
ಜ್ನಾನದೀವಿಗೆಯ ನಾವು ಹಿಡಿವೆವು ಬನ್ನಿ
ಸ್ನೇಹ ಸಂಬಂಧ ಮರೆತು ಬಾಧೆ ಪಡುವಿರೆಲ್ಲ
ಸೋದರತೆಯ ನಾವು ಮೆರೆಸುವೆವು ಬನ್ನಿ


ಬೇಧ ಭಾವ ತೊರೆದು ಬಾಂಧವ್ಯದಿ ಬೆರೆತು 

ವೈಚಾರಿಕ ಭಾವಲಹರಿಗಳಲಿ ಮೀಯಬನ್ನಿ.  

ಸಮಾನತೆಯ ಸವಿಯನು ಸವಿಯುವ ಬನ್ನಿ


ಸ್ವಾಭಿಮಾನ ಸ್ವಾವಲಂಬಿ ಬದುಕೇ ನಮ್ಮ ಗುರೀ

       ಮೂಢರಾಗಿ ಮೌಲ್ಯಗಳನು ಮಾರಿಕೊಳ್ಳದಿರೀ     
 
ಸೌಹಾರ್ಧತೆಗೆ ಆತ್ಮ ಊನವಾಗದಿರಲಿ

       ಸಂಸ್ಕೃತಿಯ ಸಾಕಾರಕೆ ಹರಿಕಾರರೆನ್ನಿ......
*************
 
ತದನಂತರ  ವಿದೇಶ ಪ್ರವಾಸಕ್ಕಾಗಿ ಹೊರಟಿದ್ದರಿಂದ ಮಕ್ಕಳಿಗೆ ಹೇಳಿಯೇ ಹೊರಟಿದ್ದೆ .
 ಇಲ್ಲಿಯವರೆವಿಗೂ ಶಾಲೆಯ ಕಡೆ ಹೋಗಲು ಸಾಧ್ಯವಾಗಿರಲಿಲ್ಲ.ನನ್ನ ಮನಸ್ಸು ಆ ಮಕ್ಕಳತ್ತಲೇ ಸೆಳೆಯುತ್ತಿದೆ.
ಇನ್ನು ಮುಂದೆ ನನ್ನ ಅಚ್ಚುಮೆಚ್ಚಿನ ಕೆಲಸವನ್ನು ಮುಂದುವರೆಸುತ್ತೇನೆ.