Dec 23, 2010

"ಅಹಂ ಎಂಬ ಮಾಯೆ"                                                  
   ಬದುಕು ಮಾಯೆಯ ಮಾಟ,
       ಮಾತು ನೊರೆ ತೆರೆಯಾಟ,
       ಅಹಂ ಎಂಬ ಮಾಯೆ ಮರೆಸುವುದು,
       ಮಾನವತೆಯ ಪಾಠ.  
            ಪ್ರತಿದಿನವೂ, ಪ್ರತಿಕ್ಷಣವು, ಪ್ರತಿಯೊಬ್ಬರಿಂದಲೂ, ಪ್ರತಿ ಹಂತಗಳಲ್ಲು ಒಂದಿಲ್ಲೊಂದು
ರೀತಿಯಲ್ಲಿ ಯಾವುದಾದರು ಒಂದು ಪಾಠವನ್ನು ಕಲಿಯುತ್ತಲೇ ಇರುತ್ತೇವೆ.ನಾವು ಎಷ್ಟೇ ಎಚ್ಚರಿಕೆ ವಹಿಸಿದರು
ನಮಗೆ ಅರಿವಿಲ್ಲದೆ ನಮ್ಮಲ್ಲೊಮ್ಮೆ ನುಸುಳಲು ಪ್ರಯತ್ನಿಸುವುದು ಅಹಂ ಎಂಬ ಮಾಯೆ. ಸ್ವಲ್ಪ ಅಲಕ್ಷ  ಮಾಡಿದರು ಅದು ನಮ್ಮ ವ್ಯಕ್ತಿತ್ವವನ್ನೇ  ನಾಶ ಪಡಿಸುವುದು.ಹಾಗಾಗಿ ನಮ್ಮವಿವೇಕವನ್ನು ಸದಾ ಎಚ್ಚರವಾಗಿರಿಸಿಕೊಳ್ಳಲು  
ಮಹಾನ್  ಸಾಧಕರ ಮಾರ್ಗದರ್ಶನ ನಮ್ಮ ಮನಃ ಪಟಲದಲ್ಲಿ ಸುಳಿಡಾದುತ್ತಿದ್ದರೆ ಅಹಂ ಎಂಬ ಮಾಯೆ ಯಿಂದ ದೂರ ವಿರಲು ಸಾಧ್ಯವಾಗುವುದು.ಅಹಂ ಎಂಬುದು ಪ್ರಾಕೃತಿಕವಾಗಿಯೂ ಹೇಗೆ ಬಿಂಬಿಸುವುದು ಎಂಬುದನ್ನು ಕೆಲವು ಉದಾಹರಣೆಗಳಿಂದ ವಿವರಿಸಿದ್ದಾರೆ.  

 ಸಂಜೆಯಾಗುತ್ತಿದ್ದಂತೆ ಮಿಂಚುಹುಳುಗಳು ಬಂದಾಗ ನಾವು ಜಗತ್ತಿಗೆ ಬೆಳಕನ್ನು ಕೊಡುತ್ತಿರುವೆವು ಎಂದು
ಜಂಭ ಕೊಚ್ಚಿಕೊಳ್ಳುವವು.ನಂತರ ನಕ್ಷತ್ರಗಳು ಮಿನುಗಲು ಪ್ರಾರಂಭಿಸಿದ ಮೇಲೆ ಅವುಗಳ ಅಹಂಕಾರ ಅಡಗಿ
ಮಂಕಾಗುವವು. ಈ ನಕ್ಷತ್ರಗಳು "ನಾವೇ ಜಗತ್ತನ್ನು ಬೆಳಗುತ್ತಿರುವೆವು," ಎಂದು ಬೀಗುವವು.ಸ್ವಲ್ಪಹೊತ್ತಿಗೆಲ್ಲಾ  
ಚಂದ್ರೋದಯದ ಕಾಂತಿಯು ನಕ್ಷತ್ರಕ್ಕೆ ನಾಚಿಕೆ ತರುತ್ತದೆ. ನಕ್ಷತ್ರಗಳು ವ್ಯಸನದಿಂದ ಮಂಕಾಗುತ್ತವೆ. ಪುನಹ  ಚಂದ್ರನು ಬೀಗುತ್ತಾ ಅಹಂನಿಂದ" ತನ್ನ  ಬೆಳದಿಂಗಲಿನಿಂದಲೇ ಜಗತ್ತು ಪ್ರಕಾಶಮಾನವಾಗಿದೆ.ಸೌಂದರ್ಯದಲ್ಲಿ ಮುಳುಗಿದೆ ."ಎಂದು  ತಿಳಿಯುವನು.ಆದರೆ ಕ್ರಮೇಣ ಅರುಣೆಪೂರ್ವ ದಿಗಂತದಲ್ಲಿ ಸೂರ್ಯೋದಯವನ್ನುಸಾರು 
ವಳು. ಈಗ ಚಂದ್ರನೂ ಮಂಕಾಗುವನು.ಸೂರ್ಯನ ಪ್ರಖರತೆಗೆ ಚಂದ್ರನುಸಂಪೂರ್ಣಮರೆಯಾಗುವನು.ಇನ್ನು 
ಮೋಡ ಮುಸುಗಿ ಸೂರ್ಯನ ಕಿರಣಗಳನ್ನೂ ಮುಚ್ಚಿದರೆ ಸೂರ್ಯನೂ ಅಸಹಾಯಕನಾಗುವನು.ಅಂತೆಯೇ ಅಹಂ
ಇರುವವರೆಗೂ.  
          ಹಾಗೆಯೇ ಪ್ರಾಕೃತಿಕವಾಗಿ ದೈವದತ್ತವಾದ ಶಕ್ತಿ ,ಸೂರ್ಯನನ್ನೇ ಕಾಣದಂತೆ ಮಾಡುವ ಮೋಡವೇ 
ಅಹಂಕಾರ.ಮೋಡವೂ ಕರಗಿ ನೀರಾದರೆ ನೈಜತೆಯನ್ನು ಕಾಣಬಹುದು.
          ಉದಾಹರಣೆಗೆ :
"ರಾಮಕೃಷ್ಣರ ಉಪದೇಶಾಮೃತ ಸಾರದಲ್ಲಿ"  ಸಾಕ್ಷಾತ್ ಭಗವಂತನೆಂದು ಪೂಜಿಸಲ್ಪಡುವ
ರಾಮಚಂದ್ರನು ಲಕ್ಷ್ಮಣನೆಂಬ  ಜೀವನಿಗಿಂತ ಒಂದೆರಡು ಹೆಜ್ಜೆ ಮುಂದೆ  ಇರುವನು.ನಡುವೆ ಸೀತೆ ಎಂಬ
ಮಾಯೆ  ನಡುವೆ ಇರುವುದರಿಂದ ಲಕ್ಷ್ಮಣನಿಗೆ ರಾಮನ ದರ್ಶನ ಸಾಧ್ಯವಾಗುವುದಿಲ್ಲ.ಆಗ ಸೀತೆಯನ್ನು ಪಕ್ಕಕ್ಕೆ 
ಸರಿಯುವಂತೆ ಕೇಳಿಕೊಂಡನು.ಸೀತೆ ಪಕ್ಕ ಸರಿದ ತಕ್ಷಣವೇ ಭಗವಂತನ ದರ್ಶನ ವಾಯಿತು.ಎಲ್ಲಿಯವರೆಗೆ ಅಹಂ ಎಂಬ   
ಮಾಯೆ ಸರಿಯುವುದಿಲ್ಲವೋ, ಅಲ್ಲಿಯವರೆಗೆ ಆತ್ಮ ಜ್ಞಾನವನ್ನು ಹೊಂದಲಾರ.ಮನುಷ್ಯನ ಅಹಂಕಾರವೇ ಮಾಯೆ.
ಎಲ್ಲವೂ ಅವನಿಂದಲೇ ,ನಾನು ಎಂಬುದು ನಿಮಿತ್ತ ಮಾತ್ರ,ಎಂಬುದನ್ನರಿತು."ನಾನು , ನಾನಿಂದಲೇ,ನಾನೇ",
ಎಂಬುದು ನಾಶವಾದಾಗ ಮಾತ್ರ,  ಲೋಕಹಿತನಾಗುವನು.
         "ರಾಮಕೃಷ್ಣರಉಪದೇಶಾಮೃತದಲ್ಲಿಯೇ" ಮತ್ತೊಂದು ಕಡೆ  ಹೇಳಿರುವಂತೆ, ಕರು ಹುಟ್ಟುತ್ತಲೇ"ಹಂ ಹೈ"ಹಂಹೈ"
(ನಾನಿರುವೆ ,ನಾನಿರುವೆ,)"ಎಂದು ಅಹಂ ನಿಂದ ಕೂಗುವುದು. ಅದು  ದೊಡ್ಡದಾದ ಮೇಲೆ
 ಎತ್ತಾದರೆ ನೇಗಿಲಿಗೆ ಕಟ್ಟುತ್ತಾರೆ ,ದವಸ ಧಾನ್ಯದ ತುಂಬಿದ ಗಾಡಿಯನ್ನೆಳೆಸುತ್ತಾರೆ .ದುಡಿಸಿಕೊಳ್ಳುತ್ತಾರೆ.
ಸೋತರೆ ಕೊಂದುತಿನ್ನುತ್ತಾರೆ. ಇಷ್ಟೊಂದು ಶಿಕ್ಷೆ ಅನುಭವಿಸಿದರೂ  ಆ ಪ್ರಾಣಿ ತನ್ನ ಅಹಂಕಾರವನ್ನು ಕಳೆದು 
ಕೊಳ್ಳಲಾರದು.ಏಕೆಂದರೆ ಇದರ ಚರ್ಮದಿಂದ ಮಾಡಿದ ತಮಟೆಇಂದ  "ಹಂ" ಎಂಬ ಧ್ವನಿ ಬರುವುದು.ಹಾಸಿಗೆಗೆ ಹತ್ತಿಯನ್ನುಬಡಿಯುವವನು ಅದರ ಕರುಳಿನಿಂದ ಬಿಲ್ಲಿನ ನಾರನ್ನು ಮಾಡಿ ಅದನ್ನು  ಹೊಡೆಯುವ ತನಕ ಇರದ  
ನಮ್ರತೆ,ಬಿಲ್ಲಿನ ನಾರನ್ನು ಮಾಡಿ ಹೊಡೆದಾಗ ಆಪ್ರಾಣಿಯ ಕರುಳು"ತೂಹೈ"(ನೀನಿರುವೆ) ಎಂದು ಹಾಡುವುದು.
ಹಾಗೆ ನಾನು ಹೋಗಿ ನೀನು ಎಂಬುದಾದಾಗಲೇ ಜೀವನದಲ್ಲಿ  ಜಾಗೃತನಾಗುವುದು."ನಾನು"ಎಂಬ ಅಜ್ಞಾನದಿಂದ
"ನೀನು"ಎಂಬ ಸುಜ್ಞಾನದೆಡೆ ಸಾಗಿದಾಗ ಜೀವನದಲ್ಲಿ ಜಾಗೃತನಾಗಿ ಸಜ್ಜನನಾಗುವನು."ದೇಹವೆಂಬ ಗುಡಿಯಲ್ಲಿ 
ಜ್ಞಾನವೆಂಬಜ್ಯೋತಿ" ಬೆಳಗುವುದು.ಆ ಜ್ಯೋತಿ ಜಗತ್ತನ್ನ ಬೆಳಗುವುದು. 
     ಶಂಕರಾಚಾರ್ಯರನ್ನು ಒಬ್ಬ ಶಿಷ್ಯ ಬಹಳ ಕಾಲದಿಂದಲೂ ಗುರುಸೇವೆಯನ್ನು ಮಾಡುತ್ತಿದ್ದರೂಅವನಿಗೆ ಉಪದೇಶವನ್ನು  ಕೊಟ್ಟಿರಲ್ಲಿಲ್ಲ.ಒಮ್ಮೆ ಶಂಕರಾಚಾರ್ಯರು ಕುಳಿತಿರುವಾಗ ಹಿಂದಿನಿಂದ ಯಾರೋ ಬರುವ ಸದ್ದು ಕೇಳಿ,
ಶಂಕರಾಚಾರ್ಯರು,ಯಾರವರು...?ಎಂದಾಗ ,ಶಿಷ್ಯನು ,"ನಾನು",ಎಂದ .ಆಗ ಶಂಕರಾಚರ್ಯರು "ಈ ನಾನೆಂಬುದು 
ಅಷ್ಟೊಂದುಇಷ್ಟವಾದರೆ ,ಅದನ್ನು ಅನಂತತೆಗೆ ವಿಸ್ತಾರ ಮಾಡು".ಅಂದರೆ ..ವಿಶ್ವವೇ ನಾನೆಂದು ತಿಳಿ .ಅಥವಾ ಅದನ್ನು ಒಂದೇ ಸಲ ತ್ಯಾಗ ಮಾಡು .ಅದು ಆಗದಿದ್ದಾಗ ,"ದಾಸನಾದ ನಾನು ,ಉಳಿಯಲಿ."ನಾನುದೇವರಸೇವಕ ",
ಭಕ್ತ ಎಂಬ ಅಹಂ,ಅಷ್ಟೇನೂ ಅಂಜಿಕೆ ಇಲ್ಲ ,ಆ ಭಾವವು ಕಡ್ಡಿಯಿಂದ ನೀರಿನ ಮೇಲೆ ಗೆರೆಎಳೆದಂತೆ ಅದುಬಹಳ ಕಾಲ 
ವುಳಿಯದು ಎಂದರಂತೆ.

ಹೀಗೆ ಮತ್ತೊಬ್ಬ ಸಾಧಕರಾದ ಬಸವಣ್ಣನವರನ್ನೇ ಅಲ್ಲಮ ಪ್ರಭು ಪರೀಕ್ಷೆ ಗೊಳಪಡಿಸಿದ ಪ್ರಸಂಗ.ಒಮ್ಮೆ 
ಬಸವಣ್ಣ ನವರ ಮಾತಿಗೆ ಗೌರವ ಕೊಟ್ಟು ಪ್ರಭು ಕಲ್ಯಾಣಕ್ಕೆ ಬಂದಾಗ ಪ್ರಭುರವರು  ಪರೀಕ್ಷೆಗೆ ಒಳಪಡಿಸಿದರಂತೆ.ಲಕ್ಷ ಜಂಗಮರಿಗೆ ನಿತ್ಯ ದಾಸೋಹ ಮಾಡಿಸುತ್ತಿದ್ದ ಬಸವಣ್ಣನವರಲ್ಲಿ ಮನೆಮಾಡಿದ್ದ 
ಅಹಂ ಹೋಗಲಾಡಿಸುವ ಸಲುವಾಗಿ ಅಲ್ಲಮರು ಹಸಿವಿನ    ಸೋಗುಹಾಕಿ  ಓಗುರವನ್ನಿಕ್ಕಿಸೆಂದು ಬಸವಣ್ಣನನ್ನು ಕೇಳುತ್ತಾರೆ .ಬಸವಣ್ಣನವರಿಗೆ ಸಮಸ್ಯೆಯಾಗುತ್ತದೆ.
ದಾಸೋಹಕ್ಕೆ ನೆರೆದಿದ್ದ ಜಂಗಮ ವೃಂದ ಊಟದ ದಾರಿ ನೋಡುತ್ತಾ ಕುಳಿತಿದೆ.ಇಲ್ಲಿ  ಪ್ರಭು
ಹಸಿವೆಂದು ಹುಯಿಲಿಡುತ್ತಿದ್ದಾರೆ. ಬಸವಣ್ಣನವರು ಪ್ರಭುವಿಗೆ ಎಲೆಹಾಕಿಸಿ ಭೋಜನವನ್ನು ಬಡಿಸಲು 
ಪ್ರಾರಂಭಿಸುತ್ತಾರೆ.ಲಕ್ಷ ,ಸಾವಿರ ಜಂಗಮರಿಗೆಮಾಡಿದ ಭಕ್ಷವೆಲ್ಲ  ಒಬ್ಬರೇ ತಿಂದು ಮುಗಿಸುತ್ತಾರೆ.
ಆದರೂ  ಅವರ ಹಸಿವೆ ಇಂಗುವುದಿಲ್ಲ.ಇದನ್ನರಿತ ಬಸವಣ್ಣನವರುಶರಣಾಗತರಾಗಿ ಕ್ಷಮೆ ಬೇಡುತ್ತಾರೆ.
ಆಗ ಪ್ರಭು "ಜಂಗಮ ದಾಸೋಹ ಮಾಡಿಸುತ್ತೇನೆ ಎಂಬ ಹಮ್ಮು ಭಿಮ್ಮು ನಿನಗೆ ಸಲ್ಲದು ಬಸವಣ್ಣ.
ನೀಡಲು ನೀನಾರು ?ಬೇಡಲು ನಾನಾರು ?  ಕೊಡುವವನು ಅವನೇ ಆಗಿರುವಾಗ ,
ನಾನು ನೀಡಿದೆ ,ನಾನು ಮಾಡಿದೆ, ಎಂಬ ಅಹಂ ತಳೆಯುವುದು ವಿವೇಕವಲ್ಲ"ಎಂದು ಹೇಳುತ್ತಾರೆ .
ಬಸವಣ್ಣನವರು ಹೊರಗೆ ಬಂದು ನೋಡಿದಾಗ ಜಂಗಮವೃಂದ   ಉಂಡು ಸುಖವಾಗಿ ಮಲಗಿರುವುದನ್ನು 
ಕಂಡೂ ಆಶ್ಚರ್ಯ ಚಕಿತರಾಗಿ "ಬಸುರಿ ಹೆಂಗಸಿನೂಟ ಹೊಟ್ಟೆಯ ಶಿಶುವ ದಣಿಸುವೊಲು,ಜಂಗಂಗಳ  
ಬಸುರೊಳು ಅಡಗಿಸಿ ಕೊಂಡು ನೀದಣಿಯಲು ಜಂಗಮಕೆ ಹಸಿವದೆಲ್ಲಿಯದು?ತಮ್ಮ ಮಹಾ ಗುರುವಿನ "ಹಿರಣ್ಯ ಗರ್ಭ "ಸ್ವರೂಪದರಿವು ಬಸವಣ್ಣನವರಿಗಾಗುತ್ತದೆ.ಹೀಗೆ ಮಹಾನ್
ಶರಣ ಸಂತ ಸಾಧಕ ರನ್ನು ಬಿಡದ ಅಹಂ  ಹುಲುಮಾನವರಾದ ನಮ್ಮನ್ನು ಬಿಡುವುದೇ ?

     ಅಹಂ ಎಂಬ ಮಾಯೆ ಆಗಾಗ ನಮಗೆ ಅರಿಯದಂತೆ ನಮ್ಮೊಳಗೇ ನುಸುಳುವ ಪ್ರಯತ್ನ ಮಾಡುತ್ತಿರುತ್ತದೆ.ಅದು 
ನಮ್ಮೊಳಗೇ  ಸುಳಿಯದಂತೆ ವಿವೇಕವೆಂಬ ಕೋಟೆಯಿಂದ ರಕ್ಷಿಸಿ ಕೊಳ್ಳುವುದು ಅಗತ್ಯವಾಗಿದೆ.ಹಾಗೆಯೇ ಅಹಂ ಎಂಬ ಕೋಟೆಯಿಂದಲೂ ಹೊರಬರಲುಆಧ್ಯಾತ್ಮದ ಪಾತ್ರ ಮಹತ್ವವಾದದ್ದು.