Oct 5, 2011

ಸರ್ವರಿಗೂ ವಿಜಯದಶಮಿಯ ಶುಭಾಶಯಗಳು


















ಆಶ್ವಯುಜಮಾಸ ಶುದ್ಧ ಪಾಡ್ಯಮಿಯಿಂದ ನವಮಿಯವರೆಗೆ ಒಂಭತ್ತು ರಾತ್ರಿಗಳನ್ನು
 ನವರಾತ್ರಿ ಎಂದು ಪ್ರತಿದಿನವೂ ಒಂದೊಂದು ರೂಪವನ್ನು ಪೂಜಿಸುವರು .ಪ್ರತಿ
ವ್ಯಕ್ತಿಯಲ್ಲಿ ಸುಪ್ತವಾಗಿರುವ ಇಚ್ಚಾಶಕ್ತಿ ,ಕ್ರಿಯಾಶಕ್ತಿ ,ಜ್ಞಾನ ಶಕ್ತಿಗಳ ಸ್ವರೂಪವೇ
ದೇವಿಯ ವಿವಿಧ ರೂಪಗಳು. ನವಶಕ್ತಿಗಳಿಂದ ಪೂರಿತಳಾಗಿ, ಪ್ರೇರಿತಳಾಗಿ
ದಶಮಿಯಂದು ದಾನವರನ್ನು ದಮನಮಾಡಿ ವಿಜಯಶಾಲಿಯಾದ ವಿಜಯಲಕ್ಷ್ಮಿ
ಯನ್ನು ನವದುರ್ಗೆಯ ರೂಪದಲ್ಲಿ  ಆರಾಧಿಸುವ ಮಹಾದಿನ.  
ನವಶಕ್ತಿಯ  ನವವಿಧದ  ಭಕ್ತಿಯು ನವಯೋಗಭರಿತಳಾಗಿ  ನವಮಾಸ ಹೊತ್ತು
ನೋವಿಗೂ ನವಶಕ್ತಿ ತುಂಬಿ ನವಚೈತನ್ಯಹರಿಸಿ
 ಹೊಸ ಜೀವಕೆ ಹೊಸ ಬೆಳಕನ್ನು ಹೊಮ್ಮಿಸುವ  ಹೆಣ್ಣು ಅಷ್ಟಭುಜಾದೇವಿ
ಶ್ರೀ ಚಾಮುಂಡೇಶ್ವರಿಯ ಪ್ರತಿರೂಪ ಎಂಬುದನ್ನು ಪ್ರತಿಬಿಂಬಿಸುವುದು 
ಈ ನವಮಿಯ ಸಂಕೇತದ ಸಂಧರ್ಭ.
ದುಷ್ಟ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸಿ,ಮನುಷ್ಯತ್ವದ ಸೀಮೆಯನ್ನು ಉಲ್ಲಂಘಿಸಿ
ದೈವತ್ವದಲ್ಲಿ ವಿಜೃಂಭಿಸುವುದೇ ನಿಜವಾದ ಸೀಮೋಲ್ಲಂಘನ,ಸಕಲ ದೇವಾದಿ
ದೇವತೆಗಳು ತಮ್ಮೆಲ್ಲ  ಅಮೂಲ್ಯ ಶಕ್ತಿಯನ್ನು,ಆಯುಧಗಳನ್ನು ಧಾರೆಯೆರೆದಾಗ
ಇವುಗಳ ಸಂಘಟಿತ ಸ್ವರೂಪದಿಂದ  ದೈತ್ಯಶಕ್ತಿಯನ್ನು ದಮನಗೊಳಿಸಿದ ಮಹಾದಿನ .....
ಈ ಮೂಲಕ ಸಂಘಟನೆಯಲ್ಲಿನ ಶಕ್ತಿಯ ಸಾಮರ್ಥ್ಯವನ್ನು ಸಾರುವುದಾಗಿದೆ.
                     

ಶಿಕ್ಷಿಸುವಾಗ ದುರ್ಗೆಯಾಗಿ ,ಉಣಿಸುವಾಗ ಅನ್ನಪೂರ್ಣೆಯಾಗಿ ಆರ್ಥಿಕತೆಯನ್ನು
ಪೂರೈಸುವಾಗ ಶ್ರೀಲಕ್ಷ್ಮಿಯಾಗಿ , ಕಲಿಸುವಾಗ ವಿಧ್ಯಾದೇವತೆಯಾಗಿ ,ಸಂತಾನ
ಲಕ್ಷ್ಮಿಯಾಗಿ ವಂಶವನ್ನು ಬೆಳೆಸುವಳು.ಹೀಗೆ ವ್ಯಕ್ತಿ ನಿರ್ಮಾಣದಲ್ಲಿ ಹೆಣ್ಣು ತನ್ನ
ಪಾತ್ರವನ್ನು ದೇವಿಯ ರೂಪದಲ್ಲಿ ನಿರ್ವಂಚನೆಯಿಂದ,ನಿಸ್ವಾರ್ಥಿಯಾಗಿ ನಿರ್ವಹಿಸುವಳು.  
ಅಂತಹಾ ಲಕ್ಷಣಗಳನ್ನು ಪ್ರತಿಪಾದಿಸಲ್ಪಡುವ ಅಷ್ಟಭುಜಾದೇವಿಯ ರೂಪವು
ವಿಶೇಷತೆಯಿಂದ ಕೂಡಿರುವುದಾಗಿದೆ.

ಒಂದು ಕೈಯಲ್ಲಿ ಭಗವದ್ಗೀತೆ : ಜ್ಞಾನದ ಸಂಕೇತ ,ವೇದ ವೇದಗಳಸಾರ,ಜ್ಞಾನಭಂಡಾರ
ಈ ಭಗವದ್ಗೀತೆ

ಕಮಲ :ಕಮಲ ಕೆಸರಿನಲ್ಲಿ ಹುಟ್ಟಿದರು ತನ್ನ ಪಾವಿತ್ರತೆಯನ್ನು ಕಾಯ್ದುಕೊಂಡಿದೆ.
ಸೂರ್ಯೋದಯಕ್ಕೆಅರಳಿದ ಕಮಲದಲ್ಲಿ ಕುಳಿತ ದುಂಬಿಯು ಕಮಲದ ಕೋಮಲತೆಗೆ
ಮೈಮರೆತು  ಹಾಗೆಯೇ  ನಿದ್ರಿಸಿರುತ್ತದೆ.ಸಂಜೆಯಾಗುತ್ತಿದ್ದಂತೆ ಕಮಲದ ದಳಗಳು
ಮುಚ್ಚಿ ಬಾಡುವುದಾದರು,ದುಂಬಿ ತನ್ನ ಕೊರೆಯುವ ಸ್ವಭಾವವನ್ನು ಮರೆತು ಒಳಗೇ
ನಿದ್ರಿಸುವುದು.ಕಮಲ ಅರಳಿದಾಗ ತಣ್ಣನೆ ಹೊರ ಬರುವುದು.ಕಮಲದ
ಕೋಮಲತೆಯಿಂದ ತನ್ನ ಪಾವಿತ್ರ್ಯತೆಯನ್ನುಮೆರೆದು ,ಕಾಪಾಡಿ ಕೊಳ್ಳುವುದಲ್ಲದೆ,
ದುಂಬಿಯ ಕ್ರೂರತೆಯನ್ನುಮರೆಸುವುದು. "ಸಜ್ಜನರ ಸಂಗ ಹೆಜ್ಜೇನು ಸವಿದಂತೆ"
ಎಂಬ ಸರ್ವಜ್ಞನ ವಚನವನ್ನು ಪ್ರತಿಪಾದಿಸುವುದು.

ತ್ರಿಶೂಲ: ಇದು ದುಷ್ಟ ಶಿಕ್ಷಣ  ,ಶಿಷ್ಟ ರಕ್ಷಣೆಯ ಸಂಕೇತವಾಗಿದೆ.
ತ್ರಿಶೂಲದೊಂದಿಗೆ ಕೆಂಪು-ಹಳದಿ ಬಣ್ಣದ  ಧ್ವಜವಿರುವುದರ ಸಂಕೇತ
ತ್ಯಾಗದ ದ್ಯೋತಕ ವಾಗಿದೆ.
ಕೆಂಪು: ತ್ಯಾಗ ,ಬಲಿದಾನದ ಪ್ರತಿಕವಾದರೆ,
ಹಳದಿಯವರ್ಣ:-ಸುವರ್ಣ ಸಮೃದ್ಧಿ ವೈಭವವನ್ನು ಸಾರುವುದಾಗಿದೆ.

ಅಗ್ನಿಕುಂಡ :ದುರ್ಗುಣಗಳನ್ನು ಅಗ್ನಿಗೆ ಹವಿಸ್ಸಾಗಿ ಅರ್ಪಣೆ ಮಾಡುವುದಾಗಿದೆ.
ಜಪಮಾಲೆ :ನಿರಂತರತೆ,ಏಕಾಗ್ರತೆಯನ್ನು ಸಾರುವುದಾಗಿದೆ.
ಘಂಟೆ :ಸದಾ ನಮ್ಮನ್ನು ಎಚ್ಚರದಿಂದಿರಿಸಿ,ನಮ್ಮ ಮನದ ದೈವತ್ವವನ್ನು ,
ಸಾಮಾಜಿಕ ಭಾವನೆಗಳನ್ನು ಜಾಗೃತಿ ಗೊಳಿಸುವುದಾಗಿದೆ.
ಖಡ್ಗ:ಶೌರ್ಯದ,ಧೈರ್ಯದ,ಸ್ಥೈರ್ಯದ  ಸಂಕೇತವಾಗಿದೆ.
ಅಭಯ ಹಸ್ತ:ನಾವು ಮಾಡುವ ಸಕಲ ಸತ್ಕಾರ್ಯಗಳಿಗು ವರದ ಹಸ್ತ ದಿಂದ ಆಶಿರ್ವದಿಸುವುದಾಗಿದೆ.
ಶ್ರಿಚಕ್ರಧಾರಿಣಿ:ಆತ್ಮ ಸಾಕ್ಷಾತ್ಕಾರ ಮಾಡಿ ಕೊಡುವ ಸಲುವಾಗಿ  ದೇವಿಶ್ರೀಲಲಿತೆಯು
ಶ್ರೀಚಕ್ರದ ಮಧ್ಯ ಬಿಂದುವಿನಲ್ಲಿ ಸ್ಥಿತಳಾಗಿರುವಳು ಎಂದು ಹೇಳಲಾಗುವುದು.ಸ್ತ್ರೀ ಸಾಮರ್ಥ್ಯದ
ಅರಿವನ್ನು ದೇವಿಯ ಮಹಿಮೆಯಿಂದ ಬಿಂಬಿಸಲಾಗುವುದು.
ಈ ಕುರಿತು ಪುರಾಣದಲ್ಲಿ ಹೀಗೆ ಹೇಳಿದೆ..ಒಮ್ಮೆ ದೇವತೆಗಳು ಯಜ್ನವನ್ನುಮಾಡುತ್ತಿರುವಾಗ
ಆ ಯಜ್ಞಕುಂಡದಿಂದ ಕಣ್ಣು ಕೋರೈಸುವ ಪ್ರಕಾಶಮಾನವಾದ ಚಕ್ರವೊಂದು ಪ್ರತ್ಯಕ್ಷವಾಯಿತು.
ಎಲ್ಲರು ಅದರತ್ತಲೇ ಅಚ್ಚರಿಯಿಂದ ನೋಡುತ್ತಲಿರುವಾಗಲೇ ಆ ಚಕ್ರದ ಮಧ್ಯ ಬಿಂದುವಿನಿಂದ
ದಿವ್ಯ ತೇಜಲಾದ ದೇವಿ ಪ್ರಕಟವಾಗಿ ದೇವತೆಗಳ ಶೌರ್ಯಕ್ಕೆ ಸವಾಲಾಗಿದ್ದ ಶೋಣಿತಪುರದ
ಅರಸ ಭಂಡ ಸುರ ಎಂಬ ರಾಕ್ಷಸನನ್ನು ವಧಿಸುತ್ತಾಳೆ,ಮತ್ತು ಬಾಲ ಭಂದಾಸುರನ ಮಕ್ಕಳನ್ನು
ವಧಿಸುತ್ತಾಳೆ.ಇಂತಹ ದುಷ್ಟ ಶಿಕ್ಷಕಿ,ಶಿಷ್ಟ ರಕ್ಷಕಿಯಾದ ದೇವಿಯನ್ನು ಸೌಮ್ಯ ರೂಪಗಳಲ್ಲಿ,
ಶ್ರೀಚಕ್ರವನ್ನು ಪೂಜಿಸಲಾಗುವುದು.     
  ಪಾಂಡವರು ಅಜ್ಞಾತವಾಸ ಮುಗಿಸಿ ಶಮೀವೃಕ್ಷದಲ್ಲಿ ಇಟ್ಟಿದ್ದ ಶಸ್ತ್ರಾಸ್ತ್ರಗಳನ್ನೂಕೆಳಗಿಳಿಸಿ
ಶಮೀವೃಕ್ಷವನ್ನು ಪೂಜಿಸಿ "ಶಮೀಶಮಯತೇ ಪಾಪಂ ,ಶಮೀ ಶತ್ರು ವಿನಾಶನಂ,
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ "ಎಂಬ ಶ್ಲೋಕವನ್ನು ಹೇಳುತ್ತಾ
ಶಮಿಯ ಧಾರಣೆ ಮಾಡುವ ದಿನವಾಗಿದೆಯಲ್ಲದೆ, ರಾಮ ರಾವಣ ,ಕುಂಭಕರ್ಣ,
ಮೇಘನಾದರನ್ನು ಸಂಹಾರ ಮಾಡಿದ ಮಹಾದಿನವಾಗಿದೆ

ಹೀಗೆ ರಾಜರಾಜೇಶ್ವರಿಯು ಮಾರ್ಗದರ್ಶಕಳಾಗಿ ಸರ್ವರಿಗೂ ಸದ್ಬುದ್ಧಿಯನ್ನು ಕರುಣಿಸಿ
ಸನ್ಮಾರ್ಗದಲ್ಲಿ ನಡೆಸುವ  ವಿಧ್ಯಾದಾಯಿನಿ ,ಶೂಲಧಾರಿಣಿ,ವಿಶ್ವಕಾರಿಣಿ,ಕಮಲಕೊಮಲೆ
ಗರ್ಭಗೌರಿ,ಸೌಮ್ಯನಾಯಕಿ ,ತ್ರಿಪುರಸುಂದರಿ ,ಕ್ಷೀರ ಸಮುದ್ರ ರಾಜತನಯೇ ,
ಶ್ರಿಚಕ್ರಧಾರಿಣಿ ವಿಜಯಶಾಲಿನಿ,ಭಾರತಭವಾನಿಗೆ ನಮನವಿದೋ ನಮನ.

ದುಷ್ಟ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸಿ,ಮನುಷ್ಯತ್ವದ ಸೀಮೆಯನ್ನು ಉಲ್ಲಂಘಿಸಿ
ದೈವತ್ವದಲ್ಲಿ ವಿಜೃಂಭಿಸುವುದೇ ನಿಜವಾದ ಸೀಮೋಲ್ಲಂಘನ, ವಿಜಯದಶಮಿಯಂದು
ಮಹಿಷಾಸುರನನ್ನು ವಧಿಸಿ ಮಹಿಷಾಸುರ ಮರ್ಧಿನಿಯಾಗಿ ಬಿಜಯಿಸಿದಳು                      

ಒಟ್ಟಾರೆ ದಾನವ ಶಕ್ತಿ ಎಷ್ಟೇ ಪ್ರಭಲವಾಗಿದ್ದರೂ... 
ಸಮಾನ ಉದ್ದೇಶ,ಧ್ಯೇಯಗಳೊಂದಿಗೆ ಸಂಘಟಿತರಾದಾಗ  ನಿರ್ಭಯವಾಗಿ
ಎದುರಿಸಬಹುದುಎಂಬ ಸಂದೇಶವನ್ನು ಸಾರುವ ವಿಜಯದಶಮಿಯ ಆಚರಣೆ
ಸರ್ವರಿಗೂ ಸ್ಪೂರ್ತಿದಾಯಕ ಹಾಗೂ ಮಾರ್ಗದರ್ಶಕವಾಗಿದೆ.