Feb 17, 2011

     "ಹಂಚಿ ತಿಂದವನಿಗೆ ಹಸಿವಿಲ್ಲ"

   "ಹಂಚಿತಿಂದವನಿಗೆ ಹಸಿವಿಲ್ಲ" ನಮ್ಮ ಹಿರಿಯರು ಸ್ವತಹ ಅನುಭವಿಸಿಯೇ ಈ ನಾಣ್ನುಡಿ ,ಗಾದೆ ಮಾತುಗಳನ್ನು 
ಹೇಳಿದ್ದಾರೆ ಎನ್ನುವುದು, ನಮ್ಮಅನುಭವಕ್ಕೆ ಬಂದಾಗಲೇ ಈ  ಚಂದದ ನುಡಿಮುತ್ತಿನ ಮಹತ್ವದ ಅರಿವಾಗುವುದು.
ಹಂಚಿ ತಿನ್ನುವುದು ಕೇವಲ ಆಹಾರವನ್ನು ಮಾತ್ರವಲ್ಲ ,ಸುಖ  ಹಂಚಿಕೊಂಡಾಗಲೂ ಸಿಗುವ  ಸಂತೋಷ,ಸಂತೃಪ್ತಿ  
ಅಪರಿಮಿತವಾದದ್ದು.   ಹಾಗೆಯೇ ದುಃಖವನ್ನು ಹಂಚಿಕೊಂಡಾಗ ಮನಸ್ಸು ಹಗುರವಾಗುವುದು. ಹಾಗೆ ನಮ್ಮ
ಸಂತೋಷ ಸಂಭ್ರಮವನ್ನು ಹಂಚಿಕೊಂಡಾಗ ಆ ಸಂತಸ ಇಮ್ಮಡಿಗೊಳ್ಳುವುದು.ಈ "ಹಂಚಿಕೋ"ಎನ್ನುವ ಪದದ ಹಂದರವೇ  ಹರವಾದದ್ದು. ಈಹಂಚಿಕೊಳ್ಳುವ ಅನುಭವವಾಗುವುದು ಮಹಿಳೆಯರಿಗೆ ಹೆಚ್ಚಿನ ಪಾಲು. ಅದು ಹೇಗೆ 
ಪುರುಷರಿಗೇನು ಆಗೋಲ್ವೇ ?ಅಂತ ಕೇಳ್ತಿರಾ ....?ಅವರಿಗೂ ಇರತ್ತೆ .ಆದರೆ ಈ ಅವಕಾಶ ಮಹಿಳೆಯರಿಗೆ ಹೆಚ್ಚು. 
ಹೇಗೆ ಅಂತಿರ .ಸಾಮಾನ್ಯವಾಗಿ ಮನೆಯ ಉಸ್ತುವಾರಿ ,ಅದರಲ್ಲೂ ಪಾಕಶಾಲೆಯ ಉಸ್ತುವಾರಿ
ಮಹಿಳೆಯರದ್ದೇ. ಜೊತೆಗೆ ಅರ್ಧಕ್ಕೆ ಅರ್ಧ ಮಹಿಳೆಯರು ಮನೆಯಲ್ಲೇ ಇರುವುದರಿಂದ ಎಲ್ಲವನ್ನು
ಹಂಚಿಕೊಳ್ಳುವ ಅವಕಾಶ ಹೆಚ್ಚು.ಕೆಲಒಮ್ಮೆ ಏನೋ ಒಂದು ವಿಶೇಷ ಖಾದ್ಯ ಯಾರೋ ಒಬ್ಬ ಅತಿಥಿಗಾಗಿ
ಬಹಳ ಪ್ರೀತಿ ಶ್ರದ್ಧೆಗಳಿಂದ ತಯಾರಿಸಿರುತ್ತೇವೆ.ಅದಕ್ಕೆ ಅನಿರೀಕ್ಷಿತವಾಗಿ ಹಲವಾರು ಅಭ್ಯಾಗತರು ಆಗಮಿಸಿ 
ಸವಿಯಾದ  ತಿನಿಸಿಗೆ ಪಾಲುದಾರರಾಗಿ ಸವಿದು ಸಂತಸದಿಂದ ಆಸ್ವಾದಿಸುತ್ತಾರೆ.ಇಂತಹಾ ಹಲವಾರು ಮನಗಳ 
ಸಂತೃಪ್ತಿಗೆ ಕಾರಣವಾದ ಮನಕೆ ಅದಿನ್ನೆಷ್ಟು ಸಂತೋಷವಾಗುವುದು.ಅದು ಅನುಭವಿಸಿದವರಿಗೆ ಗೊತ್ತು.ಅಂತಹಾ ಪ್ರಸಂಗಗಳಲ್ಲಿ ಒಂದೆರಡನ್ನು ಇಲ್ಲಿ ತೆರೆದಿಡುತ್ತಿದ್ದೇನೆ.
          ಒಮ್ಮೆ ನಮ್ಮ ಆತ್ಮೀಯ ಸ್ನೇಹಿತರೊಬ್ಬರು ಬರುವವರಿದ್ದರು.ಅದಕ್ಕಾಗಿಯೇ  ಬಹಳ ರುಚಿಕರವಾದ 
"ಸಬ್ಬಸಿಗೆಕಾಯಿಇಡ್ಲಿ"ಯನ್ನು ಸ್ವಲ್ಪ ಪ್ರಮಾಣದಲ್ಲಿಯೇ ತಯಾರಿಸಿದ್ದೆ.ಸಾಮಾನ್ಯವಾಗಿ ಅದು ಎಲ್ಲರಿಗೂ 
ಪ್ರಿಯವಾದದ್ದು.ನನ್ನಅಜ್ಜಿ ತಯಾರಿಸುತ್ತಿದ್ದ ವಿಶೇಷವಾದ ಸಾಂಪ್ರದಾಯಿಕ ಅಡುಗೆ.ಒಮ್ಮೆ"ಜೀ ಕನ್ನಡದ 
ಸವಿರುಚಿ "ಯಲ್ಲೂ    ತಯಾರಿಸಿದಾಗ ,ಕ್ಷಣದಲ್ಲಿಯೇ ಸಿಬ್ಬಂದಿಯವರು ಎಲ್ಲಾ ಖಾಲಿ ಮಾಡಿಬಿಟ್ಟಿದ್ದರು.
ನೀವೂ ಒಮ್ಮೆ ಮಾಡಿ, ಸವಿದರೆ  ನಿಮಗೆ ತಿಳಿಯುತ್ತೆ.ಬಿಸಿಬಿಸಿಯಾಗಿ ಹಬೆಯಾಡುತ್ತಾ, ಘಮಘಮಿಸುವ     
ಈ ಇಡ್ಲಿಗೆ ಕೊಬ್ಬರಿಚಟ್ನಿ ಜೊತೆಗೆ ಬೆಣ್ಣೆ  ಇದ್ದರೆ,... ಆಹಾ....ಅದರ ಸವಿ ಸವಿದವರೇ ಬಲ್ಲರು.ಇರಲಿ ಈಗ 
ನನ್ನಕತೆ ಮುಂದುವರಿಸುತ್ತೇನೆ.ಅಂದು ಸ್ನೇಹಿತರು ಸೇರಿ ಐದು ಜನರಿಗೆಂದು ತಯಾರಿಸಿದ್ದಕ್ಕೆ,ಅಕ್ಕಭಾವ 
ಅವರ ಮಕ್ಕಳು,ಭಾವನ ತಂಗಿ ಮಕ್ಕಳು ,ಆಯ್ತಾ, ನಂತರ ಒಂದುಗಂಟೆ ಬಿಟ್ಟು ನಮ್ಮ ಅಪ್ಪಅಮ್ಮಬಂದರು.
ಎಲ್ಲರೂ  ಸವಿದರು.ನನ್ನೋಬ್ಬಳನ್ನು ಬಿಟ್ಟು.ಆದರೆ ಅಷ್ಟನ್ನೂ ನಾನೊಬ್ಬಳೇ ಸವಿದು ಸಂತೃಪ್ತಳಾದಷ್ಟು
ಸಂತಸವಾಗಿತ್ತು.ಅದಕ್ಕಿಂತಲೂ ಮಿಗಿಲಾಗಿ ನಾನು ತಿಂದಿಲ್ಲ ಅನ್ನೋದೇ ಮರೆತು ಹೋಗಿತ್ತು.
         ಹೀಗೆ ನನ್ನ ಬಿಎಡ್ ಫಲಿತಾಂಶ ಬರುವ  ಹಿಂದಿನ ದಿನ ನಮ್ಮ ತಂದೆಯೊಡನೆ ಅವರ ಜಮೀನಿಗೆ ಹೋಗಿದ್ದೆ.
ನನಗೂ ಈ ಹೊಲಬೆಳೆಇವೆಲ್ಲ ನೋಡೋದು ಮಾಡೋದು ಅಂದ್ರೆ ತುಂಬಾ ಖುಷಿ.ನಮ್ಮತಂದೆನು ಯಾರನ್ನು ಅವರ
ಜಮೀನಿನ ಹತ್ತಿರ ಕರೆದುಕೊಂಡು ಹೋಗ್ತಾ ಇರಲಿಲ್ಲ,ಆದರೆ ಅಲ್ಲಿನ ಹಳ್ಳಿಯ ಮಕ್ಕಳಿಗೆ ಹಿಂದಿ ಪಾಠ ಮಾಡೋದಕ್ಕೆ
ನನ್ನ ಕರೆದುಕೊಂಡು ಹೋಗ್ತಾಇದ್ರೂ. ಹೋಗಿದ್ದೆ.ಅಲ್ಲಿ ಆಲುಗಡ್ಡೆ,ಬೀನ್ಸ,ಬೀನ್ಸಕಾಳು,ದಂಟಿನ ಸೊಪ್ಪು,ದಂಟು,
ಬೆಂಡೆಕಾಯಿ,ಮೂಲಂಗಿ ಎಲ್ಲಾ ತಂದಿದ್ದೆ.ಇರೋರು ನಾಲ್ಕು ಮಂದಿ  ಹೇಗೆ ಇವೆಲ್ಲ ಮುಗಿಸೋದು.ಕಷ್ಟ ಪಟ್ಟು 
ತಂದಿರೋದೆಲ್ಲ  ಹಾಳಾಗಿ ಹೋಗತ್ತೆ.ಈಗಿನಂತೆ ತಂಗಳ ಡಬ್ಬಿನು ಇರಲಿಲ್ಲ.ಮಾರನೆ ದಿನ ಆಗಷ್ಟ ಹದಿನೈದರ
ಸಂಭ್ರಮ,ನನ್ನ ಫಲಿತಾಂಶದ ಸಂಭ್ರಮ ಎಲ್ಲಾ ಸೇರಿ ಸಂಭ್ರಮ ಪಟ್ಟಿದ್ದು ನನ್ನವರೂ,ನಾನು ಪಾಕಶಾಲೆ ಸೇರಿದೆ
ದಂಟಿನ ಪಲ್ಲೆ,ಹಸಿಕಾಳಿನ ಫಲಾವ್,ಸೊಪ್ಪಿನ ಹುಳಿ,ಹುರುಳಿಕಾಳು ಪಲ್ಯ ,ಕೆಸರಿಬಾತು ಮತ್ತು ಮೂಲಂಗಿ 
ಸಲಾಡ್ ಇವಿಷ್ಟನ್ನು ತಯಾರಿಸುತ್ತಿರುವಾಗಲೇ ಬೆಳಗ್ಗೆ ಒಂಬತ್ತರ ಸಮಯ ನನ್ನ ಪತಿಯವರ ಸ್ನೇಹಿತರು 
ಪ್ರಥಮ   ಅತಿಥಿಯಾಗಿ ಆಗಮಿಸಿದರು.ಸಲಾಡ್ ಕೇಸರಿಬಾತ್ ಮತ್ತು ಹಾಲಿನ ಆತಿಥ್ಯನೀಡಿ ಅವರೊಂದಿಗೆ
ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವಾಗ ನನ್ನಗೆಳತಿ ಆಗಮಿಸಿದರು.ಅವರನ್ನು ಆತ್ಮೀಯತೆಯಿಂದ 
ನಮ್ಮವರೇ ಸ್ವಾಗತಿಸಿ  ನನ್ನನ್ನು ಕೂಗಿ ನೋಡು ನಿಮ್ಮ ಫ್ರೆಂಡ್ ಬಂದಿದ್ದಾರೆ  ಎಂದರು .ನಾನು ಹೊರಬಂದು 
ಬನ್ನಿಬನ್ನಿ ಕಂಗ್ರಜುಲೆಶನ್ ಎಂದೇ.ನಿಮಗೂ ಕಂಗ್ರಾಜುಲೆಶನ್ನಪ್ಪ.ಎಂದರು.ಅವರಿಗೂ ಅದೆಅತಿಥ್ಯ ನೀಡಿ 
ಮತ್ತೇ ಪಾಕಶಾಲೆಯನ್ನುಸೇರಿದೆ.ಎಂದೂ ನನ್ನಸ್ನೇಹಿತೆಯರೊಂದಿಗೆ ಮಾತನಾಡದೆ ಇದ್ದವರು ಅಂದು ಸಂಬ್ರಮದಿಂದ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು,ನಾನು ಒಳಗಿನಿಂದಲೇ ಧ್ವನಿಗೂಡಿಸುತ್ತಿದ್ದೆ.
ಮತ್ತೇ ಒಂದು ಗಂಟೆಯ ನಂತರ ಮತ್ತೇ ಇಬ್ಬರು ಇವರ ಸ್ನೇಹಿತರು,ಅವರಿಗೂ ಮತ್ತೇ ಅದೇ ಆತಿಥ್ಯ.
ಜೊತೆಗೆ ನಮ್ಮ ಮಕ್ಕಳು .ಸಲಾಡ್ ಕೇಸರಿಬಾತ್ ಮುಗಿಯಿತು.ಅವರನ್ನು ಕಳುಹಿಸಿ ಕೊಡುವ 
ವೇಳೆಗಾಗಲೇ ಒಂದುಗಂಟೆ ಸಮಯ ನಾನು ಇವರು ಇಗಲಾದ್ರು ತಿಂಡಿ ತಿನ್ನೋಣ ಎಂದು ತಟ್ಟೆಗೆ 
ಫಲಾವ್  ಪಲ್ಯ ಹಾಕಿಕೊಂಡು ಕುಳಿತೆವು.ಅಷ್ಟರಲ್ಲಿ ಇಬ್ಬರು ಸಂಭಂದಿಕರು ಸಮಾರಂಭಕ್ಕೆ ಕರೆಯೋಲೆಯನ್ನು
ನೀಡಲೆಂದು  ಬಂದರು.ಅವರನ್ನು ಸ್ವಾಗತಿಸಿ ನಮಗೆ ಬಡಿಸಿಕೊಂಡಿದ್ದ  ತಟ್ಟೆಯನ್ನೇ ಅವರಿಗೆ ಕೊಟ್ಟು 
ಉಪಚರಿಸಿ,ಮಾತನಾಡಿಸಿ ಫಲ ತಾಂಬೂಲ ಕೊಟ್ಟು ಕಳುಹಿಕೊಡುವಷ್ಟರಲ್ಲಿ ಇನ್ನಿಬ್ಬರು ನೆಂಟರು ಆಗಮಿಸಿದರು.
ಅವರಿಗೂ   ಉಪಚರಿಸಿ ಮಾತನಾಡಿಸಿ ಕಳುಹಿಸಿಕೊಟ್ಟು ,ನಾವು  ತಿಂಡಿ ತಿನ್ನುವಾಗ  ಮೂರು ಗಂಟೆಯಾಗಿತ್ತು.
ಆದರು ನಮಗೆ ಕಿಂಚಿತ್ತು ಬೇಸರವಾಗಲಿಲ್ಲ ಬದಲಾಗಿ ಏನೋ ಒಂದು ರೀತಿಯ ಆತ್ಮತೃಪ್ತಿ, ಸಮಾಧಾನ,
ಸಂತೋಷವಾಗಿತ್ತು.ಸಂತೃಪ್ತಿಯಿಂದ ಮನತುಂಬಿದಂತಿತ್ತು. ಇಂತಹಾ ಅನುಭವ ಸಾಮಾನ್ಯವಾಗಿ
ಎಲ್ಲರಿಗೂ ಆಗುವಂತಹದ್ದೆ.ಅಂತಹ ಆನಂದ ಅಪರಿಮಿತವಾದದ್ದು.  ಹಾಗೆ ಮನೆಗೆ ಹಣ್ಣನ್ನು ತಂದಾಗ ಅಕ್ಕ ಪಕ್ಕ 
ದವರಿಗೆಲ್ಲ ಕೊಟ್ಟು ನಾವು ತಿನ್ನುವುದರ ಆನಂದವೇ ಪರಮಾನಂದವಾದದ್ದು.ಅಲ್ಲವೇ ....! ಸಡಗರಸಂಭ್ರಮವನ್ನು ಹಂಚಿಕೊಳ್ಳುವುದು ಎಂತಹ ಆನಂದ. ಅಲ್ಲ,ಪರಮಾನಂದ.ಎಲ್ಲರ ಜೀವನದಲ್ಲೂ ಇಂತಹಾ ಕ್ಷಣಗಳು ಸಾವಿರಾರು 
ಘಟಿಸುತ್ತಲೇ ಇರುತ್ತವೆ.ಇಂಥವುಗಳಿಂದ ನಾವು ವಂಚಿತರಾಗಬಾರದಲ್ಲವೇ..........   
"ನಮ್ಮ "ಸಂಗೀತ ಸಾಮ್ರಾಟ,  ಹಂಸಲೆಖರವರೆ, ನೋಡಿ ಅವರ  
ಅದ್ಭುತವಾದ ರಚನೆಗಳಲ್ಲಿ  ಒಂದಾದ ಗೀತೆಯಲ್ಲಿ ,

ಒಳ್ಳೆ ಕ್ಷಣಗಳ ಕೂಡಿಡಬೇಕು...
ಬದುಕಿನ ನೆನಪಿಗೆ....., ಋತುಗಳ ಜೂಟಾಟಕೆ..
ಸೊಗಸಿನಿಂದಲೇ ಸೊಗಸಾ ಸವಿಯುವಾ..
ಸೊಗಸಿಗೆ ... ಚೆಲುವಿನ... ಸೊಗಸಿದೇ...
ಎಂತಹಾ ಸುಂದರವಾದ ಸಾಲುಗಳು.. 
ಎಂತಹಾ ಅರ್ಥಪೂರ್ಣ ಸಾಹಿತ್ಯವನ್ನು ನಮ್ಮೊಂದಿಗೆ ಹಂಚಿಕೊಲ್ಲುತ್ತಿಲ್ಲವೇ ..... 
ಸಾಮಾನ್ಯವಾಗಿ 
ಮನೆಯಲ್ಲಿ ಎಲ್ಲರಿಗೂ  ಊಟ  ಬಡಿಸಿ ಮುಗಿಸಿದ ನಂತರವೇ ಅಮ್ಮ ಊಟಮಾಡೋದು.ಅದು ಮಿಕ್ಕಿದ್ದರೆ.
ಇಲ್ಲಾಂದ್ರೆ ನೀರು ಕುಡಿದಾದ್ರೂಮಲಗಿ ಬಿಡ್ತಾರೆ.ಅಂದರೆ ಮನೆಯವರೆಲ್ಲ ಸಂತೃಪ್ತರಾದರೆ,ತಾನು ಸಂತೃಪ್ತ
ಳಾದಂತೆ. ಈಗೆಲ್ಲ ಒಟ್ಟಿಗೆ ಕುಳಿತು ಸಮನಾಗಿ ಹಂಚಿ ತಿನ್ನುವುದು ಸಾಮಾನ್ಯ. ಹಾಗಾಗಿ ಯಾರಿಗೂ ನೀರಲ್ಲೇ ಹೊಟ್ಟೆ ತುಂಬಿಸಿ ಕೊಳ್ಳೋ ಸಮಸ್ಯೆ ಇಲ್ಲ ಬಿಡಿ.  ಅದಕ್ಕೆ ಹೇಳೋದೇನೋ ಹಿರಿಯರು.
ಹಂಚಿ ತಿಂದವರಿಗೆ ಹಸಿವಿಲ್ಲ ಅಂತ.ಹಾಗೆ ಎಲ್ಲರೂ ಹಂಚಿ ತಿಂದೆ ಸಂತೋಷ ಪಡೊಲ್ಲ.ಮೊದಲು ತಾನುಂಡು 
ಸಂತೃಪ್ತರಾದ ನಂತರವೇ ಗಂಡ ಮಕ್ಕಳಿಗೆ ಬಡಿಸೋದು.ಅದು ಏನಾದ್ರೂ ನೆಂಟರಿಷ್ಟರು ತರೋ ವಿಶೇಷ 
ತಿಂಡಿಗಳನ್ನ ತಾವು ತಿಂದು ಮಿಕ್ಕಿದರೆ ಒಳಿದವರಿಗೆ.,ಇದು  ಇತ್ತೀಚೆಗಷ್ಟೇ ನಾನು  ಕಂಡ ವಿಶೇಷ ವಿಸ್ಮಯ.
ನೂರಕ್ಕೆ ಐದು ಭಾಗದಷ್ಟು ಇಂತಹ ಮಹಿಳೆಯರೂ ಇದ್ದಾರೆ.ಕೆಲವರಿಗೆ ಏನನ್ನೇ ಆದರು ಹಂಚಿ ತಿಂದರಷ್ಟೇತೃಪ್ತಿ.
ಅತಿಥಿಗಳಿಗಾಗಿ ರುಚಿ ರುಚಿಯಾದ ಭಕ್ಷ್ಯಭೋಜನ ಮಾಡಿ ಸತ್ಕರಿಸುವುದೇ ಆನಂದ ಮಾತ್ರವಲ್ಲ,ಪರಮಾನಂದ,
ಸಾರ್ಥಕತೆ.ಇನ್ನು ಕೆಲವರಿಗೆ ರುಚಿಯಾದದ್ದನ್ನು  ತಾವು ತಿನ್ನದೇ ಇತರರಿಗೆ ಒಣಬಡಿಸಿ,ಸಂತೃಪ್ತಿಗೊಳಿಸುವುದೇ
ಪರಮಸಂತೃಪ್ತಿ.ಇಂತಹವರಲ್ಲಿ,ನನ್ನವರೂ ಒಬ್ಬರು.ತಿನ್ನೋದಷ್ಟೇ ಅಲ್ಲ, ಅವರು ಇಷ್ಟಪಟ್ಟು ತಂದ ಯಾವುದೇ 
ವಸ್ತುವನ್ನಾಗಲಿ, ತನ್ನ ಬಂಧು ಮಿತ್ರರಿಗೆ ಕೊಟ್ಟರೆ ಸಮಾಧಾನ.ಸಧ್ಯ ನನ್ನನ್ನ  ಕೊಟ್ಟಿಲ್ಲ,ಅದೇನೋ
ನನ್ನಪುಣ್ಯ. ಅಂತಹದೇ ಗುಣ ಅವರ ಮೊಮ್ಮಗನಿಗೂ ಬಳುವಳಿಯಾಗಿ ಬಂದಿದೆ.ಏನನ್ನೇ ಕೊಟ್ಟರು ಎಲ್ಲರಿಗೂ ಹಂಚಿ ನಂತರ ತಾನು ತಿನ್ನುವುದು.
ಯಾರಾದ್ರು ಬೇಡವೆಂದು ನಿರಾಕರಿಸಿದರೆ ಅಳೋಕೆ ಶುರುಮಾಡಿಬಿಡ್ತಾನೆ. ಅವನ ಕೈಯ್ಯಲ್ಲಿದ್ದದ್ದು
ಮುಗಿದಿದ್ದಾಗ  ಕೇಳಿದರೆ, ಗುಬ್ಬಿ ತನ್ನ ಮರಿಗೆ ತನ್ನ ಬಾಯಿಯಿಂದಲೇ ಗುಟುಕು ಕೊಡುವಂತೆ,ತನ್ನ
ಬಾಯಲ್ಲಿರುವುದನ್ನೇ,  ತನ್ನಪುಟ್ಟ  ಬಾಯಿಯಿಂದಲೇ ನಮ್ಮ ಬಾಯಿಗೆ ಪುಲಕ್ ಅಂತ ತುಂಬಿ  ಬಿಡ್ತಾನೆ. 
ಮಕ್ಕಳ ಈ ಗುಣ ಎಷ್ಟು ಮುದ ಕೊಡುತ್ತದಲ್ಲ.........!

ಶ್ರೀ  ಮಂಜುನಾಥ  ಚಿತ್ರದ,ಅಂತಃಕರಣ ಕಲಕುವ ಗೀತೆಯಲ್ಲಿ ,.........


ಹೃದಯದ ನೋವನ್ನು ಪ್ರೀತಿಯ ಸುಧೆಮಾಡಿ

ನಾಲ್ವರ ನಗಿಸುವುದೇ ಮನುಜಾನಂದ ,

ತಾಯಿ ತಂದ ಜನ್ಮದಿಂದ ಜಗದಾನಂದ ,

ಗುರುವು ತಂದ ಪುಣ್ಯದಿಂದ ಜನುಮಾನಂದ...ಜನುಮಾನಂದ ......

ರಚನಕಾರನಿಗೆ ಸಾವಿರ ನಮನ    

ಕೇವಲ ತಿನ್ನುವುದಕ್ಕಷ್ಟೇ
ಈ ಹಂಚಿಕೊಳ್ಳುವುದು ಸೀಮಿತವಾಗಿರದೆ, ಅನೇಕ ಸಾಧು ಸಂತರು, ದಾಸವರೇಣ್ಯರು,ಮಹಾನ್ಸಾಧಕರು, ಕವಿಗಳು,ಸಾಹಿತಿಗಳು  ತಮ್ಮ ಅನುಭವದ ಸಾರಾಮೃತವನ್ನು ಸಕಲರಿಗೂ ಹಂಚಿ ಕೃತ ಕೃತ್ಯ ರಾಗಿದ್ದಾರೆ.
ಅದರಲ್ಲಿಯೇ ಪರಮಾನಂದರಾಗಿ ಅಮರತ್ವವನ್ನು ಪಡೆದು ಮಾನವನಲ್ಲಿಯ ಮಾನವೀಯತೆಗೆ ಮೂಲ ಪ್ರೇರಕರು,
ಪೂರಕರು ಆಗಿ ಸರ್ವರ ಆತ್ಮಗಳಲ್ಲು ನೆಲೆಗೊಂಡಿದ್ದಾರೆ.ಅಷ್ಟೇ ಏಕೆ ನಮ್ಮ ಬ್ಲಾಗ್ ಲೋಕದಲ್ಲಿಯೇ ತಮ್ಮ ಅದ್ಭುತ 
ಪ್ರತಿಭೆ, ಸೇವಾ ಮನೋಭಾವ,  ಅನುಭವ,ಅಭಿಪ್ರಾಯಗಳನ್ನು ,ಹಂಚಿಕೊಂಡು ಆನಂದಿಸುತ್ತಿಲ್ಲವೇ.  ಹಂಚಿ ತಿಂದು
ಆನಂದಿಸುತ್ತಿರುವುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದು ಇರಲಿಕ್ಕಿಲ್ಲ  ಎಂಬುದು ನನ್ನ ಅಭಿಪ್ರಾಯ.
  ಇದಕ್ಕೆ  ನಿಮ್ಮ ಅಭಿಮತ .....................?